
ನಿಟ್ಟೆ (ಉಡುಪಿ): ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಾoಟ್ರಾಯ್ ಪದವು ಪ್ರಾಂತ್ಯದ ಜನನಿ ಮಿತ್ರ ಮಂಡಳಿಯು ಇದೀಗ ತನ್ನ 25 ವರ್ಷಗಳ ಅರ್ಥಪೂರ್ಣ ಯಾನದ ಸಂಭ್ರಮದಲ್ಲಿದೆ. ಈ ರಜತ ಮಹೋತ್ಸವದ ಪ್ರಯುಕ್ತ ಸಿದ್ಧಪಡಿಸಲಾದ ಆಮಂತ್ರಣ ಪತ್ರಿಕೆಯ ಲೋಕಾರ್ಪಣೆ ಸಮಾರಂಭವು 18-01-2026ರ ಭಾನುವಾರ ಬೆಳಿಗ್ಗೆ ಅತ್ಯಂತ ಸಂಭ್ರಮದಿಂದ ಜರುಗಿತು.
ಗ್ರಾಮದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಸಕ್ರಿಯವಾಗಿರುವ ನಿಟ್ಟೆ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ನವೀನ್ ನಾಯಕ್ ಹಾಗೂ ಪ್ರಸಕ್ತ ಪಂಚಾಯತ್ ಸದಸ್ಯ ಸುಭಾಷ್ ಚಂದ್ರ ಹೆಗ್ಡೆ ಅವರು ಅಧಿಕೃತವಾಗಿ ಮಂಡಳಿಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಶುಭ ಸಂದರ್ಭವು ಕೇವಲ ಆಚರಣೆಗೆ ಸೀಮಿತವಾಗದೆ, ಜನೋಪಕಾರಿ ಕಾರ್ಯಕ್ಕೂ ಸಾಕ್ಷಿಯಾಯಿತು. ಮಂಡಳಿಯ ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಗುಂಡ್ಯಡ್ಕದ ಆಟೋ ರಿಕ್ಷಾ ನಿಲ್ದಾಣಕ್ಕೆ ಆರಾಮದಾಯಕ ಬೆಂಚನ್ನು ಕೊಡುಗೆಯಾಗಿ ನೀಡಲಾಯಿತು.
ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ನವೀನ್ ನಾಯಕ್ ಅವರು, “25 ವರ್ಷಗಳ ಕಾಲ ನಿರಂತರವಾಗಿ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜನನಿ ಮಿತ್ರ ಮಂಡಳಿಯ ಸಾಧನೆ ಶ್ಲಾಘನೀಯ. ಇಂತಹ ಸೇವಾ ಮನೋಭಾವದ ಸಂಘಟನೆಗಳು ಇತರ ಸಣ್ಣಪುಟ್ಟ ಸಂಸ್ಥೆಗಳಿಗೆ ದಾರಿದೀಪವಾಗಲಿ,” ಎಂದು ಹಾರೈಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಂಡಳಿಯ ಅಧ್ಯಕ್ಷ ದಿವಾಕರ ಬಂಗೇರ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಇಡೀ ಸಮಾರಂಭವನ್ನು ಅತ್ಯಂತ ವ್ಯವಸ್ಥಿತವಾಗಿ ನಿರೂಪಿಸಿದರು.




































