
ಉಡುಪಿ/ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವಕನ ಪತ್ತೆ ಪ್ರಕರಣದಲ್ಲಿ ಪೊಲೀಸರು ಕೊನೆಗೂ ಯಶಸ್ಸು ಸಾಧಿಸಿದ್ದಾರೆ. ದೀರ್ಘಕಾಲದಿಂದ ಬಗೆಹರಿಯದಿದ್ದ ಈ ಪ್ರಕರಣದ ‘ದೊಡ್ಡ ಬೀಗ’ ಕೊನೆಗೂ ತೆರೆದಿದೆ.
ದಿನಾಂಕ 06 ಡಿಸೆಂಬರ್ 2012ರಂದು, ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ನಿವಾಸಿ ಪ್ರಭಾಕರ ಪ್ರಭು ಅವರ ಮಗ ಅನಂತ ಕೃಷ್ಣ ಪ್ರಭು (ಆಗ 16 ವರ್ಷದವನು) ಮನೆಯಿಂದ ದೇವಸ್ಥಾನಕ್ಕೆ ಹೋಗಿ ನಾಪತ್ತೆಯಾಗಿದ್ದ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡದಿಂದ ಯಶಸ್ವಿ ಕಾರ್ಯಾಚರಣೆ
ಕಳೆದ 13 ವರ್ಷಗಳಿಂದ ತನಿಖೆ ನಡೆಯುತ್ತಿದ್ದ ಈ ಪ್ರಕರಣವನ್ನು ವಿಶೇಷ ತನಿಖಾ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಕೊನೆಗೂ ಯಶಸ್ವಿಯಾಗಿದೆ. ನಾಪತ್ತೆಯಾಗಿದ್ದ ಅನಂತ ಕೃಷ್ಣ ಪ್ರಭು, ಈಗ 29 ವರ್ಷದ ಯುವಕನಾಗಿ, ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ಪಿಎಸ್ಐ ಸುದರ್ಶನ್ ದೊಡಮನಿ, ಉಡುಪಿ ನಗರ ಪಿಎಸ್ಐ ಈರಣ್ಣ ಶಿರಗುಂಪಿ ಹಾಗೂ ತಂಡದ ಸದಸ್ಯರಾದ ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್, ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಅವರು ಈ ಯಶಸ್ವಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.
































