
ಮಧ್ಯಪ್ರದೇಶ: ವೈದ್ಯಕೀಯ ಲೋಕವೇ ಬೆಚ್ಚಿಬೀಳುವಂತಹ ಘಟನೆಯೊಂದು ಮಧ್ಯಪ್ರದೇಶದ ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದ ಯುವಕನೊಬ್ಬ ಮರಣೋತ್ತರ ಪರೀಕ್ಷೆಯ ಮೇಜಿನ ಮೇಲೆಯೇ ಎದ್ದು ಕುಳಿತ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ವೈದ್ಯರ ಅಚಾತುರ್ಯದಿಂದಾಗಿ ಬದುಕಿದ್ದ ಯುವಕನೇ ಶವಾಗಾರ ಸೇರಿದ್ದ ಈ ಘಟನೆ ಇಡೀ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಹುಜ್ಮಿಲ್ ಪ್ರದೇಶದ ನಿವಾಸಿ 20 ವರ್ಷದ ಜಾನ್ ಪಾರ್ಟಿ ಎಂಬ ಯುವಕ ಮಾರ್ಚ್ 11 ರಂದು ಮಾನಸಿಕ ಒತ್ತಡದಿಂದ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿನ ವೈದ್ಯರು ಯುವಕನನ್ನು ಪರೀಕ್ಷಿಸುವಲ್ಲಿ ತೋರಿದ ಆತುರ ಅನಾಹುತಕ್ಕೆ ದಾರಿ ಮಾಡಿಕೊಟ್ಟಿತ್ತು. ಯುವಕ ಮೃತಪಟ್ಟಿದ್ದಾನೆ ಎಂದು ದೃಢೀಕರಿಸಿದ ವೈದ್ಯರು, ಯಾವುದೇ ವಿಸ್ತೃತ ತಪಾಸಣೆ ನಡೆಸದೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಆದರೆ ಶವಾಗಾರದಲ್ಲಿ ವೈದ್ಯರು ದೇಹವನ್ನು ಸೀಳಲು ಸಿದ್ಧತೆ ನಡೆಸುತ್ತಿದ್ದಾಗಲೇ ಯುವಕನ ದೇಹದಲ್ಲಿ ಚಲನೆ ಕಂಡುಬಂದಿದೆ. ಕ್ಷಣಾರ್ಧದಲ್ಲಿ ಪ್ರಜ್ಞೆ ಬಂದ ಯುವಕ ತನ್ನ ಸುತ್ತಲಿನ ಸ್ಥಿತಿಯನ್ನು ಕಂಡು ಭಯಭೀತನಾಗಿ ಬೆತ್ತಲೆಯಾಗಿಯೇ ಶವಾಗಾರದಿಂದ ಹೊರಕ್ಕೆ ಓಡಿ ಬಂದಿದ್ದಾನೆ. “ಒಂದು ವೇಳೆ ಪ್ರಜ್ಞೆ ಮರಳದಿದ್ದರೆ ವೈದ್ಯರು ನನ್ನನ್ನು ಜೀವಂತವಾಗಿಯೇ ಸೀಳುತ್ತಿದ್ದರು” ಎಂದು ಯುವಕ ಹೇಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



































