
ಕಲಬುರಗಿ: ಕಬ್ಬಿನ ಇಳುವರಿಯನ್ನು ಪರಿಗಣಿಸದೆ, ಪ್ರತಿ ಟನ್ ಕಬ್ಬಿಗೆ 3,300/- ರೂ. ದರವನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ನಿರ್ದೇಶನವನ್ನು ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪಾಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಕ್ಷಣ ಆದೇಶ ಜಾರಿಗೊಳಿಸಲು ಆಗ್ರಹಿಸಿದ್ದಾರೆ.
ಇತ್ತೀಚೆಗೆ ರೈತರು ನಡೆಸಿದ ತೀವ್ರ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಪ್ರತಿ ಟನ್ಗೆ ಕಾರ್ಖಾನೆಗಳಿಂದ 3,250/- ರೂ. ಹಾಗೂ ಸರ್ಕಾರದ ವತಿಯಿಂದ 50/- ರೂ. ಸೇರಿ ಒಟ್ಟು 3,300/- ರೂ. ನೀಡಲು ತೀರ್ಮಾನಿಸಲಾಗಿತ್ತು. ಇದು ರಾಜ್ಯದ ಎಲ್ಲಾ ಕಾರ್ಖಾನೆಗಳಿಗೂ ಅನ್ವಯವಾಗುವಂತೆ ನೀಡಿದ ಸ್ಪಷ್ಟ ನಿರ್ದೇಶನವಾಗಿತ್ತು.
ಆದರೆ, ಈ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ಕಲಬುರಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ವಿಭಿನ್ನ ನಿರ್ಧಾರ ಕೈಗೊಂಡಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ. ಸಭೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯನ್ನು ಕಡೆಗಣಿಸಿ, ಪ್ರತಿ ಟನ್ಗೆ ಕಾರ್ಖಾನೆಯಿಂದ 2,950/- ರೂ. ಮತ್ತು ಸರ್ಕಾರದಿಂದ 50/- ರೂ. ಸೇರಿಸಿ ಕೇವಲ 3,000/- ರೂ. ಮಾತ್ರ ನೀಡಲು ನಿರ್ಣಯಿಸಲಾಗಿದೆ.
ಸರಕಾರವೇ ನಿಗದಿಪಡಿಸಿದ ದರಕ್ಕಿಂತ 300/- ರೂ. ಕಡಿಮೆ ನೀಡುವ ಈ ತೀರ್ಮಾನವು ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ತೀವ್ರ ಗೊಂದಲ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಈ ವಿದ್ಯಮಾನವು ರೈತರನ್ನು ಮತ್ತೊಮ್ಮೆ ಬೀದಿಗಿಳಿದು ಹೋರಾಟ ಮಾಡಲು ಪ್ರೇರೇಪಿಸುವ ಸಾಧ್ಯತೆಗಳಿವೆ ಎಂದು ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಕಾರ್ಖಾನೆಗಳ ಈ ಉಲ್ಲಂಘನೆಯು ಮುಖ್ಯಮಂತ್ರಿಗಳ ನಿರ್ದೇಶನಕ್ಕೆ ಬೆಲೆ ಕೊಡದಂತಾಗಿದೆ. ಆದ್ದರಿಂದ, ರಾಜ್ಯ ಸರ್ಕಾರವು ಕಬ್ಬಿನ ದರ ಕುರಿತ ತನ್ನ ಹಿಂದಿನ ಆದೇಶವನ್ನು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ತಕ್ಷಣವೇ ಸೂಕ್ತ ಕಾನೂನಾತ್ಮಕ ಆದೇಶವನ್ನು ಹೊರಡಿಸಬೇಕು ಎಂದು ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. ಇಲ್ಲವಾದಲ್ಲಿ, ಹೋರಾಟವು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.




































