
ಕಾರ್ಕಳ: ಹಿರ್ಗಾನದ ಪುಣ್ಯಕ್ಷೇತ್ರ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವೈಭವದ ವರ್ಷಾವಧಿ ಜಾತ್ರೋತ್ಸವದ ಸಂಭ್ರಮ ಮನೆಮಾಡಿದೆ. ಜ 22 ಮತ್ತು 23 ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಗಳು ಜರುಗಲಿವೆ.
ಜ 22 ರ ಗುರುವಾರ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರುವ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ರಾತ್ರಿಯ ವೇಳೆಗೆ ರಂಗಪೂಜೆ, ಸುತ್ತುಬಲಿ ಹಾಗೂ ಸಾಂಪ್ರದಾಯಿಕ ನೇಮೋತ್ಸವದಂತಹ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ಜ 23 ರ ಶುಕ್ರವಾರ ಸಾಂಸ್ಕೃತಿಕ ಕಲೆಗಳ ಮೆರುಗು ಹೆಚ್ಚಲಿದ್ದು, ರಾತ್ರಿ 7 ಗಂಟೆಗೆ ಕದ್ರಿ ಮಹಿಳಾ ಯಕ್ಷಕೂಟದ ಕಲಾವಿದರಿಂದ ಸ್ತ್ರೀ ಪಾತ್ರ ಪ್ರಧಾನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ತದನಂತರ ‘ನಮ್ಮ ಬೆದ್ರ’ ತಂಡದವರಿಂದ ತುಳು ನಾಟಕ ಪ್ರದರ್ಶನ ಕಂಡು ಜನರನ್ನು ರಂಜಿಸಲಿದೆ. ಇದೇ ವೇದಿಕೆಯಲ್ಲಿ ಯಕ್ಷಗಾನ ರಂಗದ ಖ್ಯಾತ ಮಹಿಳಾ ಭಾಗವತಿಕೆ ಧ್ವನಿ ಕಾವ್ಯಶ್ರೀ ಅಜೇರು ಅವರಿಗೆ ‘ಶ್ರೀ ಕುಂದೇಶ್ವರ ಸಮ್ಮಾನ್’ ಪ್ರಶಸ್ತಿ ಹಾಗೂ ರಂಗಭೂಮಿಯ ಹಿರಿಯ ಕಲಾವಿದ ಉಮೇಶ್ ಮಿಜಾರು ಅವರಿಗೆ ‘ಕುಂದೇಶ್ವರ ಕಲಾಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಗಣ್ಯರಾದ ಶಾಸಕ ವಿ ಸುನಿಲ್ ಕುಮಾರ್, ಮಂಜುನಾಥ ಪೂಜಾರಿ ಮುದ್ರಾಡಿ, ವಿಜಯ ಶೆಟ್ಟಿ, ಸುಜಯ್ ಕುಮಾರ್ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ನವೀನ್ ನಾಯಕ್ ನಿಟ್ಟೆ, ಸುನಿತಾ ಪೂಜಾರಿ ಹಾಗೂ ಗುಣಪಾಲ್ ಜೈನ್ ಅವರು ಉಪಸ್ಥಿತರಿರಲಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.



































