
ಕಲಬುರಗಿ: ಆರ್ಎಸ್ಎಸ್ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ ಅಕ್ಟೋಬರ್ 18 ರಂದು ಆರ್ಎಸ್ಎಸ್ ಪಥಸಂಚಲನ ನಡೆಸಲು ಮುಂದಾಗಿದ್ದು, ಇದು ತೀವ್ರ ಜಟಾಪಟಿಗೆ ಕಾರಣವಾಗಿದೆ.
ಪಥಸಂಚಲನದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಚಿತ್ತಾಪುರ ಪಟ್ಟಣದಾದ್ಯಂತ ಆರ್ಎಸ್ಎಸ್ ಬ್ಯಾನರ್ ಮತ್ತು ಬಾವುಟಗಳನ್ನು ಅಳವಡಿಸಿ, ಇಡೀ ಪಟ್ಟಣವನ್ನು ಕೇಸರಿಮಯ ಮಾಡಿದ್ದರು. ಆದರೆ, ಬೆಳಗಾಗುವುದರೊಳಗೆ ಈ ಆರ್ಎಸ್ಎಸ್ ಬಾವುಟ ಮತ್ತು ಬ್ಯಾನರ್ಗಳನ್ನು ಪುರಸಭೆ ಸಿಬ್ಬಂದಿಗಳು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
ಹಿಂದೂ ಪರ ಸಂಘಟನೆಗಳ ಆಕ್ರೋಶ
ಬ್ಯಾನರ್ ತೆರವುಗೊಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, “ಚಿತ್ತಾಪುರದಲ್ಲಿ ಪ್ರಜಾಪ್ರಭುತ್ವ ಇಲ್ಲದಂತಾಗಿದೆ,” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಮುಖಂಡರು, “ಪುರಸಭೆಗೆ ಆರು ಸಾವಿರ ರೂ. ಶುಲ್ಕ ತುಂಬಿ ಅನುಮತಿ ಪಡೆಯಲಾಗಿದೆ. ತೆರವುಗೊಳಿಸಿದ್ದ ಜಾಗದಲ್ಲಿ ಮತ್ತೆ ಧ್ವಜಗಳನ್ನು ಕಟ್ಟುತ್ತೇವೆ. ಎಷ್ಟೇ ಅಡೆ ತಡೆಯುಂಟು ಮಾಡಿದರೂ ಆರ್ಎಸ್ಎಸ್ ಪಥ ಸಂಚಲನ ನಡೆಸುತ್ತದೆ,” ಎಂದು ಘೋಷಿಸಿದ್ದಾರೆ.
ಇನ್ನೊಂದೆಡೆ, ಬೀಮ್ ಆರ್ಮಿ ಸೇನೆಯವರು ಸಹ ಪಥಸಂಚಲನದ ವಿರುದ್ಧ ಎಚ್ಚರಿಕೆ ನೀಡಿದ್ದು, “ನಾವೂ ಕೈಯಲ್ಲಿ ಲಾಠಿ ಹಿಡಿಯುತ್ತೇವೆ,” ಎಂದು ಸವಾಲು ಹಾಕಿದ್ದಾರೆ. ಒಟ್ಟಾರೆ ಚಿತ್ತಾಪುರದಲ್ಲಿ ನಡೆಯಲಿರುವ ಆರ್ಎಸ್ಎಸ್ ಪಥಸಂಚಲನವು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.




































