
ವೈಎಸ್ಆರ್ ಕಡಪಾ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಚಿತ್ರಾನದಿ ಸೇತುವೆಯ ಬಳಿ ಭಾನುವಾರ ತಡರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಮಹಾರಾಷ್ಟ್ರದ ಪುಣೆಯಿಂದ ಪವಿತ್ರ ಕ್ಷೇತ್ರ ತಿರುಪತಿಗೆ ತೆರಳುತ್ತಿದ್ದ ತುಪ್ಪದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ಈ ಘಟನೆಯ ಬೆನ್ನಲ್ಲೇ ರಸ್ತೆಯುದ್ದಕ್ಕೂ ಹರಿದ ತುಪ್ಪವನ್ನು ಸಂಗ್ರಹಿಸಲು ಸ್ಥಳೀಯರು ಮುಗಿಬಿದ್ದ ಪ್ರಸಂಗ ವರದಿಯಾಗಿದೆ.
ತಿರುಮಲ ಶ್ರೀವಾರಿ ಲಡ್ಡು ಪ್ರಸಾದದ ತಯಾರಿಕೆಗಾಗಿ ಈ ಶುದ್ಧ ತುಪ್ಪವನ್ನು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಚಾಲಕನ ಅಜಾಗರೂಕತೆಯಿಂದಾಗಿ ಟ್ಯಾಂಕರ್ ಪಲ್ಟಿಯಾದ ತಕ್ಷಣ, ವಾಹನದಲ್ಲಿದ್ದ ಸಾವಿರಾರು ಲೀಟರ್ ತುಪ್ಪ ರಸ್ತೆಯ ಮೇಲೆ ನದಿಯಂತೆ ಹರಿಯಲಾರಂಭಿಸಿತು. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಕೈಗೆ ಸಿಕ್ಕ ಬಕೆಟ್, ಕೊಡ ಹಾಗೂ ಪಾತ್ರೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿ, ನೆಲದ ಮೇಲೆ ಚೆಲ್ಲಿದ್ದ ತುಪ್ಪವನ್ನು ಬಾಚಿಕೊಳ್ಳಲು ಸ್ಪರ್ಧೆಗೆ ಬಿದ್ದಿದ್ದರು.
ಘಟನೆಯಲ್ಲಿ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರುಗಿದ್ದಾರೆ. ಅಪಘಾತದ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಜನಜಂಗುಳಿ ಅರ್ಧದಷ್ಟು ತುಪ್ಪವನ್ನು ಖಾಲಿ ಮಾಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಹಿಡಿದು ಜನರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲಾಗಿದೆ.




































