
ಕಾರ್ಕಳ : ನಮ್ಮ ದೇಶದ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಿರಂತರವಾಗಿ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು.
ಹೊಟೇಲ್ ಪ್ರಕಾಶ್ನಲ್ಲಿ ನಡೆದ ‘ಆಳ್ವಾಸ್ ಸಾಂಸ್ಕೃತಿಕ ವೈಭವದ’ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ‘ವಿರಾಸತ್’ ಕಾರ್ಯಕ್ರಮವು ನಡೆದುಕೊಂಡು ಬಂದಿದ್ದು, ಇದೀಗ ರಾಜ್ಯದಾದ್ಯಂತ ‘ನುಡಿಸಿರಿ ವಿರಾಸತ್’ ಪ್ರದರ್ಶನಗೊಳ್ಳುತ್ತಿದೆ ಎಂದರು. ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮವು ನವೆಂಬರ್ 29 ರಂದು ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಜರುಗಲಿದೆ ಎಂದು ಘೋಷಿಸಿದರು.

ಡಾ. ಎಂ. ಮೋಹನ ಆಳ್ವರ ಕೊಡುಗೆಗೆ ಶ್ಲಾಘನೆ
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಹಾಗೂ ಆಳ್ವಾಸ್ ನುಡಿಸಿರಿ – ವಿರಾಸತ್ ಕಾರ್ಕಳ ಘಟಕದ ಸಂಚಾಲಕರೂ ಆದ ಡಾ. ಸುಧಾಕರ್ಶೆಟ್ಟಿ ಅವರು ಪ್ರಾಸ್ತವಿಕ ಮಾತುಗಳನ್ನಾಡಿ, ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಡಾ. ಎಂ. ಮೋಹನ ಆಳ್ವರ ಕೊಡುಗೆ ಅನನ್ಯವಾಗಿದೆ. ನ. 29 ರಂದು ನಡೆಯಲಿರುವ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.
ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಅಧ್ಯಕ್ಷ ವಿಜಯ ಶೆಟ್ಟಿ ಮಾತನಾಡಿ, “ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಆಳ್ವರ ಕೊಡುಗೆ ಅಪಾರ. ಕಾರ್ಕಳದಲ್ಲಿ ನಡೆಯುವ ಈ ಸಾಂಸ್ಕೃತಿಕ ವೈಭವವು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನೆರವೇರಲಿ” ಎಂದು ಹಾರೈಸಿದರು.
ವೇದಿಕೆಯಲ್ಲಿ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ಶಾಂತಿನಿಕೇತನ ಚಾರಿಟೆಬಲ್ ಪೌಂಡೇಶನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ, ನಿವೃತ್ತ ಪ್ರಾಂಶುಪಾಲ ಗುಣಪಾಲ್ ಕಡಂಬ, ಎಸ್.ವಿ.ಟಿ ವಿದ್ಯಾಸಂಸ್ಥೆ ಸಂಚಾಲಕ ಕೆ.ಪಿ. ಶೆಣೈ, ಮತ್ತು ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




































