
ಬೆಂಗಳೂರು: ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಬರುತ್ತಿರುವ ಬಾಂಬ್ ಬೆದರಿಕೆಗಳ ಬೆನ್ನಲ್ಲೇ, ಇತ್ತೀಚೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮನೆಗಳನ್ನು ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ಇಂತಹ ಪ್ರಕರಣಗಳನ್ನು ಭೇದಿಸಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ.
ಬೆಂಗಳೂರು ಒಂದರಲ್ಲೇ ಕಳೆದ ಒಂದೂವರೆ ವರ್ಷದಲ್ಲಿ 34 ಇಂತಹ ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈನಲ್ಲಿ 22 ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಈ ಹುಸಿ ಬೆದರಿಕೆಗಳ ಹೆಡೆಮುರಿ ಕಟ್ಟಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ.
ಸಿಎಂ, ಡಿಸಿಎಂಗೆ ಬಂದ ಇ-ಮೇಲ್ ಬೆದರಿಕೆ
ಕಳೆದ ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ‘ಅರ್ನಾ ಅಶ್ವಿನ್ ಶೇಖರ್’ ಎಂಬ ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಇಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿತ್ತು. ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ 4 ಕೆಜಿಯಷ್ಟು ಆರ್ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಿರುವುದಾಗಿ, ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುವುದು ಎಂದು ಇ-ಮೇಲ್ನಲ್ಲಿ ತಿಳಿಸಲಾಗಿತ್ತು.
ಸಂದೇಶ ಬಂದ ತಕ್ಷಣ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳಲ್ಲಿ ಸಂಪೂರ್ಣ ಶೋಧ ನಡೆಸಲಾಯಿತು. ಬಳಿಕ ಅದು ಹುಸಿ ಬೆದರಿಕೆ ಅನ್ನೋದು ದೃಢಪಟ್ಟಿತು. ಈ ಸಂಬಂಧ ಪೊಲೀಸರು ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ.
ಕಳೆದ ವರ್ಷ ಬಿಐಟಿ ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಬಂಧಿಸಿದ್ದರು. ವಿಚಾರಣೆ ವೇಳೆ ಆತ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವುದು ಗೊತ್ತಾಗಿತ್ತು.
































