
ಉತ್ತರಾಖಂಡ: ಬುಧವಾರ (ಸೆಪ್ಟೆಂಬರ್ 17) ತಡರಾತ್ರಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟ ಮತ್ತು ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಈ ದುರಂತದಲ್ಲಿ ಕನಿಷ್ಠ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೇಘಸ್ಫೋಟದ ಪರಿಣಾಮವಾಗಿ ನಂದನಗರ ತಹಸಿಲ್ ವ್ಯಾಪ್ತಿಯ ಕುಂಟಾರಿ ಲಗಫಾಲಿ, ಸರ್ಪಾನಿ, ಮತ್ತು ಧುರ್ಮಾ ಗ್ರಾಮಗಳು ತೀವ್ರವಾಗಿ ಹಾನಿಗೊಳಗಾಗಿವೆ. ಹಲವು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಇದರ ಜೊತೆಗೆ, ಅಪಾರ ಪ್ರಮಾಣದ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿದೆ.
ನಾಪತ್ತೆಯಾದ 10 ಮಂದಿ
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕುಂಟಾರಿ ಲಗಪಾಲಿ ವಾರ್ಡ್ನಲ್ಲಿ ಭಾರೀ ಮಳೆಯಿಂದ ಆರು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಇಲ್ಲಿ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಅದೇ ರೀತಿ ಧುರ್ಮಾ ಗ್ರಾಮದಲ್ಲಿ ಐದು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಒಟ್ಟಾರೆಯಾಗಿ, ಈ ಘಟನೆಯಲ್ಲಿ ಹತ್ತು ಮಂದಿ ಕಣ್ಮರೆಯಾಗಿದ್ದು, ರಕ್ಷಣಾ ತಂಡಗಳು ತೀವ್ರ ಶೋಧಕಾರ್ಯದಲ್ಲಿ ತೊಡಗಿವೆ. ಪ್ರವಾಹದಲ್ಲಿ ಜಾನುವಾರುಗಳೂ ಕೊಚ್ಚಿಹೋಗಿವೆ.
ಘಟನಾ ಸ್ಥಳಕ್ಕೆ ಗಾಯಗೊಂಡವರಿಗೆ ಕೂಡಲೇ ವೈದ್ಯಕೀಯ ನೆರವು ನೀಡಲು ರಕ್ಷಣಾ ತಂಡದೊಂದಿಗೆ ಮೂರು 108 ಆಂಬ್ಯುಲೆನ್ಸ್ಗಳು ಮತ್ತು ವೈದ್ಯಕೀಯ ತಂಡವನ್ನು ರವಾನಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.




































