
ಹಿರಿಯಡಕ: ಹಿರಿಯಡಕದ ಮಣ್ಣಿನ ಮಗ, ಸರಳ ಸಜ್ಜನಿಕೆಯ ದಕ್ಷ ಐ.ಎ.ಎಸ್. ಅಧಿಕಾರಿ ಹಾಗೂ ಪ್ರಸ್ತುತ ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಹಿರಿಯಡಕ ರಾಜೇಶ್ ಪ್ರಸಾದ್ ಅವರಿಗೆ ಹಿರಿಯಡಕದ ಸಮಸ್ತ ನಾಗರಿಕರ ವತಿಯಿಂದ ಇದೇ ಭಾನುವಾರ ಭವ್ಯ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ:
ಡಿಸೆಂಬರ್ 21ರ ಸಂಜೆ 4:00 ಗಂಟೆಗೆ ಹಿರಿಯಡಕದ ಶ್ರೀ ದೇವಾಡಿಗ ಸಭಾಭವನದಿಂದ ವಿವಿಧ ವಾದ್ಯಗೋಷ್ಠಿ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ರಾಜೇಶ್ ಪ್ರಸಾದ್ ದಂಪತಿಗಳನ್ನು ವಿಶೇಷ ಮೆರವಣಿಗೆಯ ಮೂಲಕ ಸಭಾವೇದಿಕೆಗೆ ಬರಮಾಡಿಕೊಳ್ಳಲಾಗುವುದು.
ಸನ್ಮಾನ ಸಮಾರಂಭ:
ಸಂಜೆ 5:00 ಗಂಟೆಗೆ ಹಿರಿಯಡಕದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಂಬೈನ ಚಾರ್ಟಡ್ ಅಕೌಂಟೆಂಟ್ ಶ್ರೀ ಎನ್. ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಲೋಕಾಯುಕ್ತರಾದ ಜಸ್ಟಿಸ್ ಪಿ. ವಿಶ್ವನಾಥ ಶೆಟ್ಟಿ ಅವರು ರಾಜೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಿದ್ದಾರೆ. ಮಂಗಳೂರಿನ ಬ್ಯಾಂಕಿಂಗ್ ಮತ್ತು ವಿಮಾ ಸಲಹೆಗಾರರಾದ ಶ್ರೀ ನಿತ್ಯಾನಂದ ಶೆಟ್ಟಿಗಾರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ: ಮುಖ್ಯ ಅತಿಥಿಗಳಾಗಿ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ., ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ ಶೆಟ್ಟಿ, ಹಾಗೂ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ಪಾಲ್ಗೊಳ್ಳಲಿದ್ದಾರೆ. ರಾಜೇಶ್ ಪ್ರಸಾದ್ ಅವರ ಗುರುಗಳಾದ ಶ್ರೀ ಮಂಜುನಾಥ ಶೇರಿಗಾರ್ ನಿವೃತ್ತ ಪ್ರಾಂಶುಪಾಲರು ಪೆರ್ಡೂರು , ಶ್ರೀಮತಿ ಕೃಷ್ಣಬಾಯಿ ಟೀಚರ್ ಹಿರಿಯಡಕ , ಶ್ರೀ ರವಿರಾಜ ಶೆಟ್ಟಿ ಕುದಿಗ್ರಾಮ ಕೊಂಡಾಡಿ , ಶ್ರೀ ಮಂಜುನಾಥ ನಾಯಕ್ ಪೆಲತ್ತೂರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ವೈಭವ – ‘ಶನಿ ಮಹಾತ್ಮೆ’ ಪೌರಾಣಿಕ ತುಳು ನಾಟಕ:
ಸಂಜೆ 6:00 ಗಂಟೆಯಿಂದ ಮಂಗಳೂರಿನ ಖ್ಯಾತ ಶ್ರೀ ಲಲಿತೆ ಕಲಾವಿದರು (ರಿ.) ತಂಡದವರಿಂದ ಪೌರಾಣಿಕ ತುಳು ನಾಟಕ ‘ಶನಿ ಮಹಾತ್ಮೆ’ ಪ್ರದರ್ಶನಗೊಳ್ಳಲಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯ ದೀಪಕಮಾಲಾ ಹಾಡಿನೊಂದಿಗೆ ನಡೆಯಲಿರುವ ಈ ನಾಟಕಕ್ಕೆ ಕದ್ರಿ ನವನೀತ ಶೆಟ್ಟಿ ಸಾಹಿತ್ಯ ಹಾಗೂ ಜೀವನ್ ಉಳ್ಳಾಲ್ ಅವರ ನಿರ್ದೇಶನವಿದೆ. ಕಿಶೋರ್ ಡಿ. ಶೆಟ್ಟಿ ಅವರ ನಿರ್ಮಾಣದ ಈ ನಾಟಕ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ.
ಹಿರಿಯಡಕದ ಹೆಮ್ಮೆಯ ಪುತ್ರನಿಗೆ ಸಲ್ಲುವ ಈ ಗೌರವ ಕಾರ್ಯಕ್ರಮಕ್ಕೆ ಸಮಸ್ತ ನಾಗರಿಕರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ.




































