
ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ರಂಗಭೂಮಿ ಕಲಾವಿದೆ ಉಮಾಶ್ರೀ ಅವರು ದಶಕಗಳ ಸಾಂಸ್ಕೃತಿಕ ಸೇವೆಯ ನಂತರ ಇದೀಗ ಯಕ್ಷಗಾನ ರಂಗಕ್ಕೆ ಹೊಸ ಪ್ರವೇಶ ಮಾಡಿದ್ದಾರೆ. ಹೊನ್ನಾವರದ ಸೇಂಟ್ ಅಂತೋನಿ ಮೈದಾನದಲ್ಲಿ ನಡೆದ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಮಂಥರೆ ಪಾತ್ರವನ್ನು ನಿರ್ವಹಿಸುವ ಮೂಲಕ ಅಭಿನಯಕ್ಕೆ ಹೊಸ ಆಯಾಮ ನೀಡಿದರು.
ಮಂಥರೆ ಪಾತ್ರಕ್ಕೆ ಜೀವ ತುಂಬಿದ ಉಮಾಶ್ರೀ ತಮ್ಮ ಸಶಕ್ತ ಸಂಭಾಷಣೆ ಶೈಲಿ, ನೃತ್ಯ, ಪಾತ್ರದ ಹಾವಭಾವಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಇದು ನನ್ನ ಮೊದಲ ಯಕ್ಷಗಾನ. ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು ಈ ಪಾತ್ರ ಮಾಡಿದ್ದೇನೆ ಎಂದು ಉಮಾಶ್ರೀ ಭಾವುಕರಾಗಿ ಪ್ರೇಕ್ಷಕರ ಮನ ಮುಟ್ಟಿದರು.
ಯಕ್ಷಗಾನ ಕಲಾವಿದರಾದ ಕಾರ್ತಿಕ್ ಚಿಟ್ಟಾಣಿ, ಉದಯ ಹೆಗಡೆ, ಅಪ್ಟಣ್ಣ ಗೌಡ ಮಾಗೋಡು ಮುಂತಾದ ಖ್ಯಾತ ಕಲಾವಿದರೊಂದಿಗೆ ರಂಗಪ್ರವೇಶ ಮಾಡಿರುವ ಉಮಾಶ್ರೀ ಅವರು ರಂಗಭೂಮಿಯಿಂದ ಬೆಳ್ಳಿತೆರೆಗೆ ತಮ್ಮದೇ ಛಾಪು ಮೂಡಿಸಿದ ನಟಿಯಾಗಿ ಯಕ್ಷಗಾನಕ್ಕೆ ತಮ್ಮ ಕಲಾ ಪ್ರತಿಭೆಯನ್ನು ಪರಿಚಯಿಸಿದ್ದಾರೆ.
ಈ ವಿಶೇಷ ಪ್ರದರ್ಶನದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಈ ಹೊಸ ಪ್ರಯತ್ನಕ್ಕೆ ತಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. “ಅವರು ಮೊದಲ ಬಾರಿಗೆ ಯಕ್ಷಗಾನ ಪ್ರದರ್ಶಿಸುತ್ತಿದ್ದಾರೆಂದು ನಮಗೆ ತಿಳಿದಿರಲಿಲ್ಲ” ಎಂದು ಪ್ರೇಕ್ಷಕರು ಪ್ರತಿಕ್ರಿಯಿಸಿದರು.
ಈ ಯಶಸ್ಸು ಯಕ್ಷಗಾನ ರಂಗಕ್ಕೆ ಹೊಸ ಚೈತನ್ಯ ನೀಡಿದ್ದು, ಉಮಾಶ್ರೀ ಅವರ ಕಲಾ ಪ್ರಯತ್ನಕ್ಕೆ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




































