
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Parappana Agrahara Central Jail) ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ (Darshan Thoogudeepa) ಹಾಗೂ ಇತರ ಆರೋಪಿಗಳಿಗೆ ಮಹತ್ವದ ಆದೇಶವೊಂದು ಹೊರಬಿದ್ದಿದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ತಮ್ಮ ಬ್ಯಾರಕ್ನಲ್ಲಿ ಟಿವಿ (Television) ಅಳವಡಿಸಲು ಅನುಮತಿ ಕೋರಿ ದರ್ಶನ್ ಮಾಡಿದ್ದ ಮನವಿಗೆ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ (CCH Court) ಅಸ್ತು ಎಂದಿದೆ.
ಬುಧವಾರ, ಡಿಸೆಂಬರ್ 3 ರಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ (Pavithra Gowda) ಸೇರಿದಂತೆ ಹಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರು, “ಜೈಲಿನ ವಾತಾವರಣದಿಂದ ಮನಸ್ಸಿಗೆ ತೀವ್ರ ತಳಮಳ ಉಂಟಾಗುತ್ತಿದೆ, ಇರಲು ಕಷ್ಟವಾಗುತ್ತಿದೆ. ದಯವಿಟ್ಟು ಟಿವಿ ವ್ಯವಸ್ಥೆ ಮಾಡಿಸಿಕೊಡಿ,” ಎಂದು ನ್ಯಾಯಾಧೀಶರ ಮುಂದೆ ಕೋರಿಕೆ ಸಲ್ಲಿಸಿದ್ದರು.
ಸಿಸಿಟಿವಿ ಕಣ್ಗಾವಲಿನಲ್ಲಿ ಟಿವಿ ಅಳವಡಿಕೆ
ದರ್ಶನ್ ಅವರ ಈ ಮನವಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಇಂದು (ಡಿಸೆಂಬರ್ 4) ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದರ್ಶನ್ ಸೇರಿದಂತೆ ಇತರ ಆರೋಪಿಗಳ ಬ್ಯಾರಕ್ಗಳಲ್ಲಿ ಟೆಲಿವಿಷನ್ ಅಳವಡಿಕೆ ಮಾಡಲು ಕೋರ್ಟ್ ಅನುಮತಿ ನೀಡಿದ್ದು, ಇದರ ಜೊತೆಗೆ ಕಡ್ಡಾಯವಾಗಿ ಟಿವಿ ಅಳವಡಿಸುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಹಾಕುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಈ ಕ್ರಮದಿಂದ ಆರೋಪಿಗಳ ಚಲನವಲನ ಮತ್ತು ವರ್ತನೆಗಳ ಮೇಲೆ ನಿರಂತರ ನಿಗಾ ಇರಿಸಲು ಸಾಧ್ಯವಾಗಲಿದೆ.
ಪ್ರಮುಖ ಸಾಕ್ಷಿಗಳ ವಿಚಾರಣೆ: ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್
ಈ ಮಧ್ಯೆ, ಪ್ರಕರಣದ ಪ್ರಮುಖ ಹಂತವಾಗಿ, ಮೃತರಾದ ರೇಣುಕಾಸ್ವಾಮಿ ಅವರ ತಂದೆ ಮತ್ತು ತಾಯಿಗೆ ವಿಚಾರಣೆಗೆ ಹಾಜರಾಗಲು ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ರೇಣುಕಾಸ್ವಾಮಿ ಅವರ ಪೋಷಕರನ್ನು ಪ್ರಕರಣದ ಪರೋಕ್ಷ ಸಾಕ್ಷಿಗಳಾಗಿ (Indirect Witnesses) ನ್ಯಾಯಾಲಯ ಪರಿಗಣಿಸಿದ್ದು, ಡಿಸೆಂಬರ್ 17 ರಂದು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ. ಡಿಸೆಂಬರ್ 17 ರಿಂದ ಪ್ರಕರಣದ ವಿಚಾರಣೆ ಹಂತ ಹಂತವಾಗಿ ಮುಂದುವರೆಯಲಿದ್ದು, ಪ್ರಮುಖ ಸಾಕ್ಷ್ಯಗಳ ಪರಿಶೀಲನೆ ಮತ್ತು ಸಾಕ್ಷಿ ಹೇಳಿಕೆಗಳು ನ್ಯಾಯಾಧೀಶರ ಮುಂದೆ ನಡೆಯಲಿವೆ.
ಸದ್ಯ ಜೈಲಿನಲ್ಲಿರುವ ಏಳನೇ ಆರೋಪಿ ಪ್ರದೋಷ್ ಅವರಿಗೆ ಮತ್ತೊಮ್ಮೆ ಮಧ್ಯಂತರ ಜಾಮೀನು ವಿಸ್ತರಿಸಲಾಗಿದ್ದು, ತಮ್ಮ ತಂದೆಯ ಕಾರ್ಯವೊಂದರಲ್ಲಿ ಭಾಗವಹಿಸಲು ಡಿಸೆಂಬರ್ 7 ರವರೆಗೆ ಜಾಮೀನು ನೀಡಲಾಗಿದೆ.




































