
ರಿಯಾದ್: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನೊಬ್ಬ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಅವಶೇಷಗಳು ಬಿದ್ದ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ. ಸೌದಿಯ ರಿಫೈನರಿ ಬಳಿ ಸಂಭವಿಸಿದ ಈ ದುರಂತದಲ್ಲಿ ಯುಪಿ ಮೂಲದ ರವಿ ಗೋಪಾಲ್ (26) ಜೀವ ಕಳೆದುಕೊಂಡಿದ್ದು, ಅವರ ಕುಟುಂಬಕ್ಕೆ ಆಧಾರವಾಗಿದ್ದ ಏಕೈಕ ಕೊಂಡಿ ಕಳಚಿದಂತಾಗಿದೆ.
ಮಾರ್ಚ್ 18ರ ಬುಧವಾರದಂದು ರವಿ ಅವರು ಕೆಲಸ ಮುಗಿಸಿ ರಾತ್ರಿ 8:20ರ ಸುಮಾರಿಗೆ ತಮ್ಮ ಪತ್ನಿ ರಿತು ಅವರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಸಂಭಾಷಣೆ ನಡೆಯುತ್ತಿದ್ದಾಗಲೇ ಅತ್ತ ಕಡೆಯಿಂದ ಭೀಕರ ಸ್ಫೋಟದ ಸದ್ದು ಕೇಳಿಬಂದಿದ್ದು, ತಕ್ಷಣವೇ ಫೋನ್ ಸಂಪರ್ಕ ಕಡಿತಗೊಂಡಿದೆ. ಸೌದಿ ಅರೇಬಿಯಾ ಹೊಡೆದುರುಳಿಸಿದ ಇರಾನ್ನ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅವಶೇಷಗಳು ರಿಯಾದ್ನ ದಕ್ಷಿಣ ಭಾಗದ ರಿಫೈನರಿ ಬಳಿ ಬಿದ್ದಿದ್ದು, ಈ ವೇಳೆ ರವಿ ಅವರ ಮೇಲೆ ಅವಶೇಷಗಳು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 2020ರಲ್ಲಿ ವಿವಾಹವಾಗಿದ್ದ ರವಿ ಅವರಿಗೆ ನಾಲ್ಕು ವರ್ಷದ ಮಗನಿದ್ದು, ವೃದ್ಧ ಪೋಷಕರು ಸೇರಿದಂತೆ ಇಡೀ ಕುಟುಂಬ ಇವರ ದುಡಿಮೆಯನ್ನೇ ನಂಬಿಕೊಂಡಿತ್ತು. ಘಟನೆ ನಡೆದು ಎರಡು ದಿನ ಕಳೆದರೂ ಮೃತದೇಹವನ್ನು ತಾಯ್ನಾಡಿಗೆ ತರಲು ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಇದುವರೆಗೆ ಒಟ್ಟು 6 ಭಾರತೀಯರು ಬಲಿಯಾಗಿದ್ದಾರೆ.



































