
ಕಾರ್ಕಳ: ನಿಟ್ಟೆ ಗ್ರಾಮದ ಪರಪ್ಪಾಡಿಯ ನಿವಾಸಿ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಪ್ರಕರಣವು ಇದೀಗ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ 25 ವರ್ಷದ ಯುವಕ ಅಭಿಷೇಕ್, ತನ್ನ ಸಾವಿಗೆ ಕಾರಣರಾದವರನ್ನು 7 ಪುಟಗಳ ಡೆತ್ ನೋಟ್ನಲ್ಲಿ ಸ್ಪಷ್ಟವಾಗಿ ಹೆಸರಿಸಿ ಆತ್ಮಹತ್ಯೆಗೆ ಶರಣಾಗಿರುವುದು ಮನಕಲಕುವಂತಿದೆ.
ಬೆಳ್ಮಣ್ಣಿನ ಖಾಸಗಿ ಲಾಡ್ಜ್ನಲ್ಲಿ ನಡೆದ ಈ ದುರಂತ ಘಟನೆಗೆ ಸಂಬಂಧಿಸಿದಂತೆ, ಮೃತರ ಪೋಷಕರಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಆರೋಪಿಗಳ ಕೂಡಲೇ ಬಂಧನಕ್ಕೆ ಆಗ್ರಹಿಸಿ ಕಾರ್ಕಳ ಶಾಸಕ ಮತ್ತು ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಘಟನೆ ಮತ್ತು ಹಿನ್ನೆಲೆ:
ಮೃತ ಅಭಿಷೇಕ್ ಆಚಾರ್ಯ ಅವರು, ತಮ್ಮ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಈ ಸಂಬಂಧದಲ್ಲಿ ಉಂಟಾದ ಗೊಂದಲಗಳು ಹಾಗೂ ಯುವತಿ ಮತ್ತು ಆಕೆಯ ಸ್ನೇಹಿತರಿಂದ ನಿರಂತರವಾಗಿ ನೀಡುತ್ತಿದ್ದ ಮಾನಸಿಕ ಕಿರುಕುಳ, ಸಂಚಿನಿಂದ ಬೇಸತ್ತು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೃತರ 7 ಪುಟಗಳ ಡೆತ್ ನೋಟ್ನಲ್ಲಿ, ತಮ್ಮ ಪ್ರಾಣ ಹೋಗಲು ನೇರ ಕಾರಣರಾದ ಗೆಳತಿ ಹಾಗೂ ಆಕೆಯ ಸಹಚರರ ಕುರಿತು ವಿಸ್ತೃತ ವಿವರಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಆತ್ಮಹತ್ಯೆಯ ಹಿಂದೆ ಷಡ್ಯಂತ್ರ ಮತ್ತು ಬ್ಲಾಕ್ ಮೇಲ್ ತಂತ್ರಗಾರಿಕೆ ಇರಬಹುದೆಂಬ ಬಲವಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ. ಈ ‘ತಂಡ’ವು ಈ ಹಿಂದೆಯೂ ಹಲವರಿಗೆ ವಂಚಿಸಿರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಶಾಸಕರ ಪ್ರಮುಖ ಬೇಡಿಕೆಗಳು:
ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಶಾಸಕ ವಿ. ಸುನಿಲ್ ಕುಮಾರ್ ಅವರು, ಮೃತ ಅಭಿಷೇಕ್ ಅವರ ಕುಟುಂಬಕ್ಕೆ ಆದಾರದಾಗಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವುದರಿಂದ, ಅವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಶಾಸಕರು, ಡೆತ್ ನೋಟ್ನಲ್ಲಿ ಹೆಸರಿಸಲಾದ ಎಲ್ಲಾ ವ್ಯಕ್ತಿಗಳು ಪ್ರಬಲ ಸಾಕ್ಷ್ಯ ನಾಶ ಮಾಡುವ ಮೊದಲು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ನ್ಯಾಯಸಮ್ಮತವಾಗಿ, ಸಮಗ್ರವಾಗಿ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಿ, ಸತ್ಯಾಂಶವನ್ನು ಹೊರತರಬೇಕೆಂದು ಅವರು ಗಂಭೀರ ಮನವಿ ಮಾಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅತ್ಯವಶ್ಯಕ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.