
ಉಡುಪಿ: ನಗರದ ಕೋರ್ಟ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಉಡುಪಿ ಶಾಖೆಯಲ್ಲಿ ವ್ಯಕ್ತಿಯೋರ್ವ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹13,19,000 ರೂಪಾಯಿ ನಗದು ಪಡೆದು ವಂಚನೆಗೈದ ಘಟನೆ ನಡೆದಿದೆ. ವಂಚನೆ ಮಾಡಿದ ಆರೋಪಿಯನ್ನು ಪುನೀತ್ ಆನಂದ ಕೋಟ್ಯಾನ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ
ಬ್ಯಾಂಕ್ ಆಫ್ ಮಹಾರಾಷ್ಟ್ರದ ಉಡುಪಿ ಶಾಖೆಯ ಶಾಖಾಧಿಕಾರಿ ಅಭಿಷೇಕ್ ಗೌಡ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಪುನೀತ್ ಆನಂದ ಕೋಟ್ಯಾನ್ ಎಂಬಾತನು:
- ಜೂನ್ 18, 2025 ರಂದು: ಬ್ಯಾಂಕಿಗೆ ಬಂದು 50 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹3,20,000 ಸಾಲ ಪಡೆದುಕೊಂಡಿರುತ್ತಾನೆ.
- ಜುಲೈ 02, 2025 ರಂದು: ಸುಮಾರು 177.40 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹9,99,000 ಸಾಲವನ್ನು ಪಡೆದುಕೊಂಡಿರುತ್ತಾನೆ.
ಕೆಲವು ದಿನಗಳ ಹಿಂದೆ ಪುನೀತ್ ಆನಂದ ಕೋಟ್ಯಾನ್ ಬೇರೆ ಬೇರೆ ಬ್ಯಾಂಕ್ಗಳಲ್ಲಿ ನಕಲಿ ಚಿನ್ನಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ತಿಳಿದುಬಂದಿದೆ. ಕೂಡಲೇ ಬ್ಯಾಂಕಿನಲ್ಲಿ ಪುನೀತ್ ಅಡವಿಟ್ಟಿದ್ದ ಚಿನ್ನಾಭರಣಗಳ ಪರೀಕ್ಷೆ ನಡೆಸಿದಾಗ, ಅವು ನಕಲಿ ಎಂದು ದೃಢಪಟ್ಟಿವೆ.
ಆರೋಪಿ ಪುನೀತ್ ಆನಂದ ಕೋಟ್ಯಾನ್ ಬ್ಯಾಂಕಿಗೆ ನಕಲಿ ಚಿನ್ನಾಭರಣಗಳನ್ನು ಅಸಲಿ ಚಿನ್ನವೆಂದು ನಂಬಿಸಿ ಒಟ್ಟಾರೆಯಾಗಿ ₹13,19,000 ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರು ದಾಖಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 195/2025 ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



































