
ಕಾರ್ಕಳ ಕಾಂಗ್ರೆಸ್ ಹರ್ಷ
ಕಾರ್ಕಳ ಕಾಂಗ್ರೆಸ್ ಹರ್ಷ
ಅವೈಜ್ಙಾನಿಕ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ಕ್ರಮದಿಂದ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದ ರಾಜ್ಯದ ವರ್ತಕ ವಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿಶೇಷ ಕಾಳಜಿಯಿಂದ ರಕ್ಷಿಸಿದ್ದಾರೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.
ಟೀ ಅಂಗಡಿ, ಕಾಂಡಿಮೆಂಡ್ಸ್, ಬೇಕರಿ ಮುಂತಾದ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಅಭಿವೃದ್ಧಿಗೊಂಡ ಯುಪಿಐ ಆ್ಯಪ್ ಮೂಲಕ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು ಇದನ್ನೇ ಮಾನದಂಡವಾಗಿಸಿದ ಕೇಂದ್ರ ಸರ್ಕಾರ ನಿಯಂತ್ರಿತ ತೆರಿಗೆ ಇಲಾಖೆಯು ವ್ಯಾಪಾರಿಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ಹಾಕಿ ನೋಟಿಸ್ ಜಾರಿಗೊಳಿಸಿದ್ದರಿಂದಾಗಿ ರಾಜ್ಯದ ವರ್ತಕ ವಲಯವು ಆತಂಕಕ್ಕೀಡಾಗಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಮಯೋಚಿತ ನಿರ್ಧಾರದಿಂದ ವ್ಯಾಪಾರಿ ವಲಯದ ಈ ಎಲ್ಲಾ ಆತಂಕವನ್ನು ದೂರಗೊಳಿಸಿದ್ದು, ಇದು ಸಿದ್ದರಾಮಯ್ಯನವರ ಆಡಳಿತ ಅನುಭವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ನಿಯಂತ್ರಿಯ ತೆರಿಗೆ ಇಲಾಖೆಯ ಅವೈಜ್ಞಾನಿಕ ತೆರಿಗೆ ಸಂಗ್ರಹದ ಕ್ರಮಗಳು ನಿತ್ಯ ಜನರನ್ನು ಶೋಷಣೆಗೊಳಪಡಿಸುತ್ತಿದೆ, ಅದರಲ್ಲಿ ಪ್ರಮುಖವಾಗಿ
ವ್ಯಾಪಾರಸ್ಥರಿಗೆ ದಿನ ಒಂದಕ್ಕೆ 2000 ರೂಪಾಯಿಗಿಂತ ಹೆಚ್ಚುವರಿ ಹಣವು ಗೂಗಲ್ ಪೆ ಮೂಲಕ ಜಮಾವಣೆಯಾದರೆ ಅದರಿಂದ ಶೇಕಡಾ 1.8 ರಷ್ಟು ಹಣವನ್ನು GST ಪಾವತಿಸಬೇಕಾಗಿದೆ.
ಕಷ್ಟಕಾಲದಲ್ಲಿ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜನರು ತಮ್ಮ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಹಾಗು ಜೀವ ವಿಮೆ ಮಾಡಿಸಿಕೊಂಡರೆ ಅಲ್ಲಿಯೂ ತೆರಿಗೆ ಇಲಾಖೆ ಶೇಕಡಾ 18 ರಷ್ಟು GST ಬರೆ ಹಾಕಿ ಜನರನ್ನು ಶೋಷಿಸುತ್ತಿದೆ. ತಮ್ಮ ಕಷ್ಟಕ್ಕೆ ಸಹಾಯವಾಗಲಿ ಎಂದು ಆರೋಗ್ಯ ವಿಮೆ ಮಾಡಿಸುವ ಜನರಿಗೆ ತೆರಿಗೆ ಇಲಾಖೆ ಕಷ್ಟಕೊಡುವುದು ಅಮಾನವೀಯ ಕ್ರಮ, ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ತಮ್ಮ ಕಷ್ಟ ಕಾಲಕ್ಕೆ ಸಹಾಯ ಆಗಲಿ ಎಂದು ಜನಸಾಮಾನ್ಯರು ಆರೋಗ್ಯ ವಿಮೆ, ಜೀವ ವಿಮೆಗಳನ್ನು ಮಾಡುತ್ತಾರೆ, ಆದರೆ ಶೇಕಡಾ 18 ರಷ್ಟು ಹಣ ಹೆಚ್ಚುವರಿಯಾಗಿ GST ಮುಖಾಂತರ ಯಾಕೆ ಕಟ್ಟಬೇಕು?
ವಿಮೆಯನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿಯೂ ಪುನಃ ಅದೇ GST ತೆರಿಗೆ ಹಾಕಿ ಅದರಲ್ಲೂ ಹಣ ವಸೂಲಿ ಮಾಡುವ ಕ್ರಮ ಎಷ್ಟು ಸರಿ?
ನಾವು ಬ್ಯಾಂಕ್ ನಲ್ಲಿ ನಮ್ಮ ಹಣ ತೆಗೆಯಲು GST, ನಮ್ಮ ಖಾತೆಗೆ ಹಣ ಹಾಕಲು GST ಇದು ಯಾವ ನ್ಯಾಯ ? ನಾವು ದುಡಿದ ಹಣದ ಮೇಲೂ GST ಹಾಕಿ ನಮ್ಮನ್ನು ಪುನಃ ಮೋಸಗೊಳಿಸುತ್ತಾರೆ.
ಹೋಟೆಲುಗಳಲ್ಲಿ ಆಹಾರ ತಯಾರಿಸಲು ಬಳಸುವ ಪ್ರತಿಯೊಂದು ಆಹಾರ ಸಾಮಗ್ರಿಗಳ ಮೇಲೆಯೂ GST ಭರಿಸಿಯೇ ಹೊಟೇಲ್ ಮಾಲೀಕರು ಖರೀದಿ ಮಾಡುತ್ತಾರೆ, ಹೊಟೇಲಿಗೆ ತಂದು ಅದನ್ನು ಬೇಯಿಸಿ ಗ್ರಾಹಕರಿಗೆ ಬಡಿಸುವಾಗ ಮತ್ತೆ ಗ್ರಾಹಕರ ಮೇಲೆ GST ಹಾಕಲಾಗುತ್ತಿದೆ…! ಇದು ಯಾವ ನ್ಯಾಯ..?
ಆಸ್ಪತ್ರೆ ಯಲ್ಲಿ ರೋಗಿಗೆ ನೀಡುವ ಪ್ರತಿಯೊಂದು ಮೆಡಿಸಿನ್ ಮೇಲೆ GST ಹಾಕಿ ಡಿಸ್ಚಾರ್ಜ್ ಆದಮೇಲೆ ಬಿಲ್ಲಿನ ಮೇಲೆ ಕೂಡಾ GST ಬರೆ ಹಾಕುತ್ತಿರುವುದು ಅತ್ಯಂತ ಅಮಾನವೀಯವಾಗಿದೆ, ಕೇಂದ್ರದ ಬಿಜೆಪಿ ಸರ್ಕಾರ ಜನರ ಮೇಲೆ ವಿಧಿಸುತ್ತಿರುವ ಅಮಾನುಷ ತೆರಿಗೆಯನ್ನು ಪುನಃ ಪರಿಷ್ಕರಿಸಬೇಕಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.