
ಪತ್ತನಂತಿಟ್ಟ: ಹೆತ್ತ ಮಗುವನ್ನು ಕಳೆದುಕೊಂಡ ಅಪಾರ ನೋವಿನ ನಡುವೆಯೂ ಕೇರಳದ ದಂಪತಿಯೊಬ್ಬರು ಕೈಗೊಂಡ ಸಾಹಸಮಯ ನಿರ್ಧಾರ ಇಂದು ನಾಲ್ವರು ರೋಗಿಗಳಿಗೆ ಮರುಜೀವ ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 10 ತಿಂಗಳ ಪುಟ್ಟ ಕಂದಮ್ಮ ಅಲಿನ್ ಶೆರಿನ್ ಅಬ್ರಹಾಂ, ತನ್ನ ಅಂಗಾಂಗ ದಾನದ ಮೂಲಕ ದೇಶದ ಅತಿ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಮಾನವೀಯತೆಯ ಮಹೋನ್ನತ ಉದಾಹರಣೆಯಾಗಿ ಉಳಿದಿದ್ದಾಳೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಈ ಮಗು ತನ್ನ ತಂದೆ-ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು (Brain Dead). ಮಗು ಬದುಕುಳಿಯುವ ಸಾಧ್ಯತೆ ಇಲ್ಲ ಎಂಬ ಕಹಿ ಸತ್ಯ ತಿಳಿದ ಪಾಲಕರು, ದುಃಖವನ್ನು ಹತ್ತಿಕ್ಕಿ ಮಗುವಿನ ಮೂತ್ರಪಿಂಡ, ಯಕೃತ್ತು ಹಾಗೂ ಹೃದಯ ಕವಾಟುಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಈ ಒಂದು ನಿರ್ಧಾರದಿಂದಾಗಿ ಸಾವಿನ ದವಡೆಯಲ್ಲಿದ್ದ ನಾಲ್ವರು ವ್ಯಕ್ತಿಗಳಿಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಮಗುವಿನ ಅಂಗಾಂಗಗಳನ್ನು ಕೊಚ್ಚಿಯ ಅಮೃತ ಆಸ್ಪತ್ರೆಯಿಂದ ತಿರುವನಂತಪುರಕ್ಕೆ ಸಾಗಿಸಲು ಕೇರಳ ಪೊಲೀಸರು ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಮಾಡಿದ್ದರು. ಪೊಲೀಸ್ ಬೆಂಗಾವಲಿನಲ್ಲಿ ಸಂಜೆ 7.15 ರ ಸುಮಾರಿಗೆ ಆಂಬ್ಯುಲೆನ್ಸ್ ರಾಜಧಾನಿಯನ್ನು ತಲುಪಿತು. ಈ ಪೈಕಿ ಮಗುವಿನ ಮೂತ್ರಪಿಂಡವನ್ನು ತಿರುವನಂತಪುರಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಹೃದಯಸ್ಪರ್ಶಿ ಘಟನೆಯನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶ್ಲಾಘಿಸಿದ್ದು, ಮಗುವಿನ ಪೋಷಕರಿಗೆ ಇಡೀ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.



































