
ನವದೆಹಲಿ: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಘೋಷಿಸುವ ‘ಉಚಿತ ಕೊಡುಗೆ’ಗಳ (Freebies) ಸಂಸ್ಕೃತಿಯ ವಿರುದ್ಧ ಸುಪ್ರೀಂ ಕೋರ್ಟ್ ಗುಡುಗಿದೆ. ಸರ್ಕಾರಗಳ ಆದ್ಯತೆ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿರಬೇಕೇ ಹೊರತು, ಆರ್ಥಿಕತೆಗೆ ಹೊರೆಯಾಗುವ ಉಚಿತ ಯೋಜನೆಗಳನ್ನಲ್ಲ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ದೇಶದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ರಾಜಕೀಯ ಪಕ್ಷಗಳ ಉಚಿತ ಯೋಜನೆಗಳ ಘೋಷಣೆಯು ಕಳವಳಕಾರಿ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಇಂತಹ ಘೋಷಣೆಗಳು ರಾಜ್ಯ ಸರ್ಕಾರಗಳನ್ನು ಸಾಲದ ಸುಳಿಗೆ ತಳ್ಳುತ್ತಿವೆ ಮತ್ತು ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. “ಸರ್ಕಾರಗಳು ಜನರಿಗೆ ಸ್ವಾವಲಂಬಿ ಬದುಕು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕೇ ಹೊರತು, ಸಾರ್ವಜನಿಕರ ಹಣವನ್ನು ಉಚಿತ ಯೋಜನೆಗಳಿಗೆ ವ್ಯಯಿಸುವುದು ಸರಿಯಲ್ಲ” ಎಂದು ಪೀಠವು ಕಿವಿಮಾತು ಹೇಳಿದೆ.
ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ಜನರಿಗೆ ಉಚಿತ ವಿದ್ಯುತ್ ನೀಡಲು ಮುಂದಾಗಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ವೇಳೆ ಈ ಪ್ರಮುಖ ಅಂಶಗಳು ಚರ್ಚೆಗೆ ಬಂದವು. 2024 ರ ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕಾಯ್ದೆಯು ವಿತರಣಾ ಕಂಪನಿಗಳು (Discoms) ಭಾರಿ ನಷ್ಟ ಅನುಭವಿಸುವುದನ್ನು ತಡೆಯುವ ಉದ್ದೇಶ ಹೊಂದಿದೆ. ತಮಿಳುನಾಡು ವಿದ್ಯುತ್ ವಿತರಣಾ ಸಂಸ್ಥೆಯು ಈ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿತ್ತು. ಉಚಿತ ಕೊಡುಗೆಗಳು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಮತ್ತು ಇಡೀ ರಾಜ್ಯದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಾರದು ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.



































