
ಕಾರವಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್ಸಿಬಿ ಟೀಶರ್ಟ್ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು.
ಮೂಲತಃ ಮಂಗಳೂರು ಮೂಲ್ಕಿಯ ಅಕ್ಷತಾ, ಸಿ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾಶಾಲಿ ಯುವತಿ. ಒಂದು ವರ್ಷದ ಹಿಂದೆ ಸಿದ್ದಾಪುರದ ಇಂಜಿನಿಯರ್ ಆಶಯ್ ಅವರನ್ನು ವಿವಾಹವಾಗಿದ್ದಳು. ಇಬ್ಬರೂ ಆರ್ಸಿಬಿ ಅಭಿಮಾನಿಗಳಾಗಿ, ರೋಡ್ ಶೋದಲ್ಲಿ ಪಾಲ್ಗೊಳ್ಳಲು ರಜೆ ತೆಗೆದುಕೊಂಡು ಟೀಶರ್ಟ್ ಧರಿಸಿ ಹೊರಟಿದ್ದರು.
ರೋಡ್ ಶೋ ರದ್ದಾದ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಹೋಗಿದ್ದರು. ಗೇಟ್ ನಂ.17 ಬಳಿ ನಡೆದ ಕಾಲ್ತುಳಿತದಲ್ಲಿ ಗಂಡ-ಹೆಂಡತಿ ಬೇರೆಯಾಗಿದ್ದಾರೆ. ಈ ವೇಳೆ ಆಶಯ್ನ್ನು ಒಬ್ಬ ಮಹಿಳೆ ರಕ್ಷಿಸಿದ್ದರೂ, ಅಕ್ಷತಾ ಜನದಟ್ಟಣೆಯಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಅಕ್ಷತಾಳ ಶವ ಸಿದ್ದಾಪುರಕ್ಕೆ ತಲುಪಿಸಿದ್ದು,ಗಂಡನ ಮನೆಯಲ್ಲಿಯೇ ಇಂದು ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.