
ಬೆಂಗಳೂರು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯುವ ಬ್ರಿಗೇಡ್ ಆಯೋಜಿಸಿದ್ದ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ವಿಚಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸದಂತೆ ನೀಡಲಾದ ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಅವರು ಸರ್ಕಾರವನ್ನು ಕಟುಕವಾಗಿ ಟೀಕಿಸಿದ್ದಾರೆ.
ಜೋಶಿ ಮಾತನಾಡುತ್ತಾ, “ವಿಚಾರ ವ್ಯಕ್ತಪಡಿಸಲು ಅವಕಾಶ ನೀಡದೆ, ವಾಕ್ ಸ್ವಾತಂತ್ರ್ಯ ಹರಣ ಮಾಡುವ ಮೂಲಕ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸಲಾಗುತ್ತಿದೆ. ಇದು ಯಾವುದೇ ಪ್ರಜಾಪ್ರಭುತ್ವದ ರಾಜಕೀಯಕ್ಕೆ ತಕ್ಕದ್ದಲ್ಲ,” ಎಂದರು.
ನೋಟಿಸ್ ನೀಡಿದ್ದು ಸಂವಿಧಾನ ವಿರೋಧಿ?
“ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂಬ ತೀರ್ಮಾನದಂತೆ ನೋಟಿಸ್ ನೀಡಿರುವುದು, ಸ್ವತಂತ್ರವಾಗಿ ಮಾತನಾಡುವ ಹಕ್ಕಿಗೆ ಧಕ್ಕೆ ತರುತ್ತದೆ. ಇದು ಸಿದ್ದರಾಮಯ್ಯ ಸರ್ಕಾರದ ಅಸಹಿಷ್ಣುತನದ ಸುವ್ಯಕ್ತ ನಿದರ್ಶನವಾಗಿದೆ,” ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಡಿಎನ್ಎಯಲ್ಲಿ ತುರ್ತು ಪರಿಸ್ಥಿತಿಯ ತತ್ವ?
ಜೋಶಿಯವರು ತೀವ್ರವಾಗಿ ಟೀಕಿಸುತ್ತಾ, “ಇಂದು ಚಕ್ರವರ್ತಿ ಸೂಲಿಬೆಲೆ ಮೇಲೆ ನಿಗಾ, ನಾಳೆ ಮತ್ತೊಬ್ಬ ಚಿಂತಕನ ಮೇಲೆ. ತುರ್ತು ಪರಿಸ್ಥಿತಿಯಂತಹ ನಿರ್ಬಂಧಗಳನ್ನು ಬಿಜೆಪಿ ವಿರುದ್ಧ, ರಾಷ್ಟ್ರಪ್ರೇಮಿಗಳ ವಿರುದ್ಧ ಹೇರುತ್ತಿರುವುದು ಕಾಂಗ್ರೆಸ್ ಪಕ್ಷದ ಶೈಲಿಯಾಗಿದೆ. ಇದೇ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ನವ ಆವೃತ್ತಿಯಲ್ಲವೇ?” ಎಂದು ಪ್ರಶ್ನಿಸಿದರು.
ಪೋಲೀಸರು ಕೈಗೊಂಬೆಗಳಾಗುತ್ತಿದ್ದಾರಾ?
“ಪೋಲೀಸರು ಯಾರ ಮನೆಗೆ ಬೇಕಾದರೂ ನುಗ್ಗುತ್ತಿದ್ದಾರೆ, ನೋಟಿಸ್ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವುದು, ಹಾಗೂ ಆರ್ಥಿಕ ಮತ್ತು ವೈಚಾರಿಕ ಸ್ವಾತಂತ್ರ್ಯ ಹರಣಕ್ಕೆ ದಾರಿ ಮಾಡಿಕೊಡುತ್ತಿದೆ,” ಎಂದು ಅವರು ವಾದಿಸಿದರು.
ಈ ಕುರಿತು ಕಾಂಗ್ರೆಸ್ ಅಥವಾ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.