
ನೀರೆ : ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು. ನೀರೆ ಗ್ರಾಮದ ಜಡ್ಡಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಸೈಬರ್ ಅಪರಾಧಗಳು, 112 ತುರ್ತು ಸಹಾಯವಾಣಿ, ಹಾಗೂ ‘ಮನೆ ಮನೆ ಪೊಲೀಸ್’ ಉಪಕ್ರಮದ ಕುರಿತು ಅಮೂಲ್ಯ ಮಾಹಿತಿಯನ್ನು ಒದಗಿಸಿದರು.
ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ ಅಪರಾಧಗಳನ್ನು ತಡೆಯುವ ಮತ್ತು ಸುರಕ್ಷಿತ ಜೀವನ ನಡೆಸಲು ಸಹಕರಿಸುವ ನಿಟ್ಟಿನಲ್ಲಿ ಉಮೇಶ್ ನಾಯಕ್ ಅವರ ಈ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸೈಬರ್ ವಂಚನೆಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು, ತುರ್ತು ಪರಿಸ್ಥಿತಿಯಲ್ಲಿ 112 ಸಹಾಯವಾಣಿಯನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಪೊಲೀಸ್ ಇಲಾಖೆಯ ‘ಮನೆ ಮನೆ ಪೊಲೀಸ್’ ಯೋಜನೆಯ ಉದ್ದೇಶಗಳ ಬಗ್ಗೆ ಅವರು ಸರಳವಾಗಿ ವಿವರಿಸಿದರು. ಈ ಕಾರ್ಯಕ್ರಮವು ಪೊಲೀಸ್ ಮತ್ತು ನಾಗರಿಕರ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಯಿತು.ಮಾಹಿತಿ ನೀಡಿದ ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್ಸ್ಟೇಬಲ್) ಉಮೇಶ್ ನಾಯಕ್ ರವರಿಗೆ ನೀರೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿರುತ್ತಾರೆ.