
ಚಿಕ್ಕಮಗಳೂರು: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜೊತೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಕೇಸರಿ ಶಾಲು ಧರಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ. ಈ ಕುರಿತು ಮಾತನಾಡಿದ ಶಾಸಕಿ, “ನಾನು ಧರ್ಮಕ್ಕಾಗಿ ಕೇಸರಿ ಶಾಲು ಧರಿಸಿದ್ದೇನೆ; ಕಾಂಗ್ರೆಸ್ಸೋ-ಬಿಜೆಪಿಯೋ ಎಂಬುದಕ್ಕೆ 3 ವರ್ಷ ಕಾಯೋಣ” ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಸ್ಪಷ್ಟೀಕರಣ
ಮೂಡಿಗೆರೆಯಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಯನಾ ಮೋಟಮ್ಮ, “ಹಿಂದೂವಾಗಿ, ದಲಿತೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ಮುಂದೆ ಬಿಜೆಪಿಗೆ ಹೋಗ್ತಿನೋ, ಕಾಂಗ್ರೆಸ್ಸಿನಲ್ಲೇ ಉಳಿತಿನೋ, ಬಿಎಸ್ಪಿ ಅಥವಾ ಎಸ್ಡಿಪಿಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ” ಎಂದರು.
“ಇಂದು ಕೇಸರಿ ಶಾಲು ಹಾಕಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಈ ಬಗ್ಗೆ ಹಲವರಿಗೆ ಪ್ರಶ್ನೆಗಳಿವೆ. ನದಿ ಎಂದರೆ ಕಾಂಗ್ರೆಸ್ಸಾ, ದಡ ಎಂದರೆ ಬಿಜೆಪಿಯಾ ಎಂಬ ಶಂಕೆ ಬೇಡ” ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಗಣಪತಿಗಾಗಿ, ಧರ್ಮಕ್ಕಾಗಿ ಬಂದಿದ್ದೇನೆ. ಶಾಸಕಿಯಾಗಿ ಪಕ್ಷ ಪ್ರತಿನಿಧಿಸುವುದು ಆನಂತರ. ಈಗ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಯಾವ ಪಕ್ಷದವರಿಗೂ ಪ್ರಶ್ನೆಗಳು ಉಳಿಯಬಾರದು” ಎಂದು ನಯನಾ ಮೋಟಮ್ಮ ಹೇಳಿದರು.
“ಕಾಂಗ್ರೆಸ್ ಶಾಸಕಿಯಾಗಿಯೂ ನಿಂತಿದ್ದೇನೆ. ಅದನ್ನು ಗುರುತಿಸಿಕೊಳ್ಳಲೇಬೇಕು. ಅದರ ಜೊತೆಗೆ ಸಾಕಷ್ಟು ಅಸ್ತಿತ್ವಗಳು ಇವೆ. ಅದನ್ನೆಲ್ಲಾ ಸೇರಿಸಿಕೊಂಡು ನಯನಾ ಮೋಟಮ್ಮ ಆಗಿದ್ದೇನೆ. ಯಾರೂ ಕೂಡ ಹುಟ್ಟುವಾಗಲೇ ಇಂತಹ ಜಾತಿ-ಧರ್ಮ, ಹೆಣ್ಣು-ಗಂಡು ಎಂದು ಹುಟ್ಟಿರುವುದಿಲ್ಲ” ಎಂದರು.