
ಉತ್ತರ ಪ್ರದೇಶ: ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿರುವ ಫತೇಹಾಬಾದ್ನಲ್ಲಿ ಸೋಮವಾರ (ಅಕ್ಟೋಬರ್ 21) ದೀಪಾವಳಿ ಬೋನಸ್ನ ಅತೃಪ್ತಿಯಿಂದಾಗಿ ಟೋಲ್ ಸಂಗ್ರಹ ಸಿಬ್ಬಂದಿ ಟೋಲ್ ಗೇಟ್ಗಳನ್ನು ತೆರೆದಿಟ್ಟು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಶ್ರೀ ಸೈನ್ ಆಂಡ್ ದಾತಾರ್ ಕಂಪನಿಯಿಂದ ನಿರ್ವಹಿಸಲ್ಪಡುವ ಈ ಟೋಲ್ ಪ್ಲಾಜಾದ 21 ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ಕೇವಲ 1100 ರೂ.ಗಳನ್ನು ನೀಡಲಾಗಿತ್ತು. ಈ ಕಡಿಮೆ ಮೊತ್ತದಿಂದ ಸಿಟ್ಟಿಗೆದ್ದ ಕಾರ್ಮಿಕರು ಸಾಮೂಹಿಕವಾಗಿ ಕೆಲಸ ನಿಲ್ಲಿಸುವ ನಿರ್ಧಾರಕ್ಕೆ ಬಂದರು.
ಟೋಲ್ ಸಿಬ್ಬಂದಿಯ ಈ ಅನಿರೀಕ್ಷಿತ ಪ್ರತಿಭಟನೆಯಿಂದಾಗಿ, ಫತೇಹಾಬಾದ್ ಟೋಲ್ ಪ್ಲಾಜಾದ ಎಲ್ಲಾ ಗೇಟ್ಗಳು ತೆರೆದುಕೊಂಡವು. ಪರಿಣಾಮವಾಗಿ, ಸಾವಿರಾರು ವಾಹನಗಳು ಯಾವುದೇ ಶುಲ್ಕವನ್ನು ಪಾವತಿಸದೆ ಹಾಗೆಯೇ ಹಾದು ಹೋದವು. ಈ ಪ್ರತಿಭಟನೆಯು ಸಾಮಾನ್ಯ ಟೋಲ್ ಕಾರ್ಯಾಚರಣೆ ಮತ್ತು ಸಂಚಾರದಲ್ಲಿ ಗಂಭೀರ ಅಡಚಣೆಯನ್ನು ಸೃಷ್ಟಿಸಿತು.
ಈ ವರ್ಷದ ಮಾರ್ಚ್ನಲ್ಲಿ ಕಂಪನಿಯು ಟೋಲ್ ನಿರ್ವಹಣೆಯನ್ನು ವಹಿಸಿಕೊಂಡ ನಂತರ ಬೋನಸ್ ವಿತರಣೆ ಮತ್ತು ಅದರ ಲೆಕ್ಕಾಚಾರದ ಬಗ್ಗೆ ವಿವಾದಗಳು ಶುರುವಾಗಿದ್ದವು.
ಹೆಚ್ಚಿನ ಬೋನಸ್ ಮೊತ್ತಕ್ಕೆ ಒತ್ತಾಯಿಸಿದ ನೌಕರರು ಕೆಲಸದಿಂದ ವಿಮುಖರಾದಾಗ, ಟೋಲ್ ಆಡಳಿತವು ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಇತರ ಟೋಲ್ ಪ್ಲಾಜಾಗಳಿಂದ ಸಿಬ್ಬಂದಿಯನ್ನು ಕರೆತರುವ ಪ್ರಯತ್ನ ಮಾಡಿತು. ಆದರೆ, ಪ್ರತಿಭಟನಾ ನಿರತ ಕಾರ್ಮಿಕರು ಬದಲಿ ಸಿಬ್ಬಂದಿಯನ್ನು ಕೆಲಸ ಮಾಡಲು ಬಿಡದೆ ತಡೆದರು, ಇದರಿಂದ ಬಿಗಡಾಯಿಸಿದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಯಿತು.
ಸಂಗತಿಯ ಕುರಿತು ಮಾಹಿತಿ ತಿಳಿದು, ಪೊಲೀಸರು ತಕ್ಷಣ ಟೋಲ್ ಪ್ಲಾಜಾಕ್ಕೆ ಆಗಮಿಸಿದರು. ಅವರು ಕಂಪನಿಯ ಅಧಿಕಾರಿಗಳು ಮತ್ತು ಅತೃಪ್ತ ಕಾರ್ಮಿಕರ ನಡುವೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸಿದರು.
ಚರ್ಚೆಯ ನಂತರ, ಟೋಲ್ ಕಂಪನಿಯ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಬೇಡಿಕೆಗಳನ್ನು ಪರಿಹರಿಸುವ ಬಗ್ಗೆ ಭರವಸೆ ನೀಡಿದರು. ತಕ್ಷಣದ ಕ್ರಮವಾಗಿ ವೇತನದಲ್ಲಿ ಶೇಕಡಾ 10 ರಷ್ಟು ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಯಿತು. ಈ ಭರವಸೆಯ ನಂತರ, ನೌಕರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು, ಸುಮಾರು ಎರಡು ಗಂಟೆಗಳ ಕಾಲದ ಈ ಅಸ್ತವ್ಯಸ್ತ ಪರಿಸ್ಥಿತಿ ತಿಳಿಯಾಗಿ, ಟೋಲ್ ಕಾರ್ಯಾಚರಣೆಯನ್ನು ಪುನರಾರಂಭಿಸಿದರು.



































