
ತಮಿಳುನಾಡು : ತಮಿಳುನಾಡಿನ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರು ಸ್ವಯಂ ಪ್ರೇರಿತವಾಗಿ ಹುದ್ದೆಯಿಂದ ಕೆಳಗಿಳಿದ ಹಿನ್ನೆಲೆಯಲ್ಲಿ, ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಹೊಸ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯು ಏಪ್ರಿಲ್ 12 ರಂದು ನಡೆಯಬೇಕಾಗಿತ್ತು. ಆದರೆ ನೈನಾರ್ ನಾಗೇಂದ್ರನ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ, ಅವರ ಹೆಸರು ಖುದ್ದಾಗಿ ಅಣ್ಣಾಮಲೈ ಅವರಿಂದ ನಾಮನಿರ್ದೇಶನಗೊಂಡಿತ್ತು, ಇದನ್ನು ಇತರ ನಾಯಕರು ಸಹ ಒಮ್ಮತದಿಂದ ಅಂಗೀಕರಿಸಿದರು.
ಬಿಜೆಪಿ ಪ್ರಧಾನ ಕಚೇರಿಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ. ತಮಿಳುನಾಡಿನ ತೇವರ್ ಸಮುದಾಯದ ಪ್ರಮುಖ ನಾಯಕನಾಗಿ ನೈನಾರ್ ನಾಗೇಂದ್ರನ್ ಬಿಜೆಪಿ ಬೆಂಬಲಿಗರ ನಡುವೆ ಖಚಿತ ಸ್ಥಾನ ಪಡೆದುಕೊಂಡಿದ್ದಾರೆ. ಈ ಹುದ್ದೆಗೆ ವನತಿ ಶ್ರೀನಿವಾಸನ್ ಮತ್ತು ತಮಿಳಿಸೈ ಸೌಂದರರಾಜನ್ ಅವರ ಹೆಸರುಗಳು ಚರ್ಚೆಗೆ ಬಂದಿದ್ದರೂ ಅಂತಿಮವಾಗಿ ಹೈಕಮಾಂಡ್ ನಾಗೇಂದ್ರನ್ ಪರ ನಿರ್ಧಾರ ಕೈಗೊಂಡಿದೆ.