
ಈಗಾಗಲೇ ರಾಷ್ಟ್ರ ವ್ಯಾಪಿ ಕುತೂಹಲಕ್ಕೆ ಒಳಗಾಗಿ, ಚರ್ಚೆಯಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಹಜ್ಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ತಿಳಿಸಿದ್ದಾರೆ.
ಈ ಹಿಂದೆಯೇ ನಮ್ಮ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ಸಂಧರ್ಭದಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ರಾಜಕೀಯ ಕುಳಗಳು ಮತ್ತು ಕೆಲವೊಂದು ಸರಕಾರಿ ಸಂಸ್ಥೆಗಳಿಂದ ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ಅನಧಿಕೃತ ಪರಭಾರೆಯ ಬಗ್ಗೆ ಮಂಡಿಸಿದ್ದ ಪರಿಣಾಮಕಾರಿ ವರದಿಯನ್ನು ಅಂದಿನ ಬಿಜೆಪಿ ಸರಕಾರ ಸದನದಲ್ಲಿ ಮಂಡಿಸಲು ಮುಂದಾಗಿತ್ತು. ಅದೇ ಸಮಯದಲ್ಲಿ ಸರಕಾರವು ಆಡಳಿತ ವಂಚಿತವಾಗಿ, ಬಳಿಕ ರಾಜ್ಯದ ಅಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರವು ತನ್ನ ಶಾಸಕರು, ಸಚಿವರು ಹಾಗೂ ಮುಖಂಡರುಗಳಿಂದಲೇ ಆಸ್ತಿ ಲೂಟಿಯಾಗಿರುವುದನ್ನು ಮುಚ್ಚಿಡಲು ಕುತಂತ್ರ ನಡೆಸಿ ಸದ್ರಿ ವರದಿಯನ್ನೇ ಕಸದ ಬುಟ್ಟಿಗೆಸೆಯಿತು.
ಈಗಾಗಲೇ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡನೆಯ ಸಮಯದಲ್ಲಿ ಈ ವರದಿಯ ಗಂಭೀರತೆಯ ಬಗ್ಗೆ ಚರ್ಚೆಯಾಗಿರುವುದು ಕೂಡ ಗಮನಾರ್ಹ ಅಂಶವಾಗಿರುತ್ತದೆ. ಈ ಎಲ್ಲ ಬೆಳವಣಿಗೆಗಳ ಬಳಿಕ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿರುವ ವಿರೋಧ ಪಕ್ಷಗಳು ಹಾಗೂ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಈ ಮಸೂದೆ ಮುಸ್ಲಿಂ ವಿರೋದಿ ಎಂದು ಬೊಬ್ಬಿರಿತ್ತಿರುವುದು ಕಂಡುಬರುತ್ತಿದೆ.
ಅನಾದಿ ಕಾಲದಿಂದಲೂ ನಮ್ಮ ಸಮುದಾಯದ ಹಿರಿಯರು, ಶ್ರೀಮಂತ ವರ್ಗದ ಆಸ್ತಿವಂತರು, ತ್ಯಾಗಜೀವಿಗಳು ಬಡವರ ಬಗ್ಗೆ ಕಾಳಜಿ ಹೊಂದಿ ತಮ್ಮ ಒಡೆತನದ ಅಸ್ತಿಗಳನ್ನು ವಕ್ಫ್ ಮಾಡಿ ಪವಿತ್ರವಾದ ಉದ್ದೇಶವನ್ನು ಇರಿಸಿಕೊಂಡು ಅದನ್ನು ಅಲ್ಲಾಹನ ಆಸ್ತಿ ಎಂದು ಘೋಷಿಸಿರುವುದು ಮುಸ್ಲಿಂ ಸಮುದಾಯದ ಒಳಿತಿಗಾಗಿ ಎಂಬುವುದು ನಿಸ್ಸಂದೇಹ ಅಲ್ಲವೆ? ನಮ್ಮ ಸಮುದಾಯದ ಶ್ರೇಯೋಭಿವೃದ್ದಿ ಹಾಗೂ ಬಡ ವರ್ಗದ ಮುಸ್ಲಿಮರ ಕಲ್ಯಾಣಕ್ಕಾಗಿ ದುಡಿಯಬೇಕಾಗಿದ್ದ ಸ್ಥಳೀಯ, ರಾಜ್ಯ, ರಾಷ್ಟ್ರೀಯ ವಕ್ಫ್ ಸಂಸ್ಥೆಗಳು, ಮುಸ್ಲಿಂ ಪರ ಎನ್ನುವ ಸಂಘಟನೆಗಳು, ಅದೆಷ್ಟು ರಾಜಕೀಯ ಪಕ್ಷಗಳು ವಕ್ಫ್ ಆಸ್ತಿಗಳನ್ನು ಉಪಯೋಗಿಸಿ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದೆ ಎನ್ನುವುದು ಇನ್ನು ಕೂಡ ಯಕ್ಷಪ್ರಶ್ನೆಯಾಗಿ ಉಳಿದಿದೆ ಅಲ್ಲವೆ?
ಇಂತಹ ಸಂಧರ್ಭದಲ್ಲಿ ಈ ಎಲ್ಲಾ ಒಳಿತು ಕೆಡುಕುಗಳ ಬಗ್ಗೆ ಚಿಂತಿಸಿ ಕೇಂದ್ರದಲ್ಲಿ ಬಿಜೆಪಿ ಸರಕಾರವು ವಕ್ಫ್ ನೂತನ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವ ಬಗ್ಗೆ ಸತ್ಯಾಸತ್ಯತೆಯನ್ನು ಅರಿತುಕೊಂಡು ಇನ್ನಾದರು ಅದರಿಂದಾಗಿ ಯಾವುದೇ ಸ್ಥಳೀಯ ರಾಜ್ಯ, ರಾಷ್ಟ್ರೀಯ ವಕ್ಫ್ ಸಂಸ್ಥೆ ಗಳು, ಆಡಳಿತಾತ್ಮಕ ಸಂಸ್ಥೆಗಳು ಅಥವಾ ಇನ್ನಿತರ ಸರಕಾರಗಳು ಎಚ್ಚೆತ್ತುಕೊಂಡು ಆ ಪವಿತ್ರಾತ್ಮರ, ತ್ಯಾಗಜೀವಿಗಳ ಪವಿತ್ರವಾದ ಕೊಡುಗೆಯನ್ನು ತಮ್ಮ ಸ್ವಯಂ ಸ್ವಾರ್ಥದ ಬಯಕೆಗಳಿಗೆ ಬಳಸಿ ದುರುಪಯೋಗಪಡಿಸಿ ಶಾಪಕ್ಕೆ ಒಳಗಾಗುವುದರ ಬದಲಿಗೆ ಮುಸ್ಲಿಂ ಸಮುದಾಯದ ಬಡವರ ಏಳಿಗೆಗಾಗಿ ಉಪಯೋಗಿಸುವ ಪುಣ್ಯ ಕೆಲಸಕ್ಕೆ ಮುಂದಾಗಲಿ ಎಂಬುವುದೇ ಸಮುದಾಯದ ಪಾಲಿನ ಬಡವರ ಹಕ್ಕಿನ ಕೂಗಾಗಿರುತ್ತದೆ ಎಂದು ಎಂ.ಸಲೀಂ ಅಂಬಾಗಿಲು ಪತ್ರಿಕಾ ಪ್ರಕಟಣೆಯ ಮೂಲಕ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.