
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಕಂಬಳ, ತನ್ನ ಜೋಡುಕರೆ ಕಂಬಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರತಿವರ್ಷ ಅತಿ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವುದು ವಿಶೇಷ. ಈ ಬಾರಿಯೂ ಇಂದು ನಡೆಯಲಿರುವ ಈ ಕಂಬಳಕ್ಕೆ 276 ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಸಮಿತಿಯ ಪ್ರಕಾರ್ಯದರ್ಶಿ ಗುಣಪಾಲ ಕಡಂಬ ತಿಳಿಸಿದ್ದಾರೆ.
ಮಿಯ್ಯಾರು ಕಂಬಳದ ಇತಿಹಾಸ ಹಳೆಯದು. 2004ರಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಅಧೀನದ ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಮತ್ತು ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪ್ರಯತ್ನದಿಂದ ಈ ಕಂಬಳ ಪುನರಾರಂಭವಾಯಿತು. ಪ್ರಸ್ತುತ ಜೀವನ್ದಾಸ್ ಭಂಡಾರಿ ಅವರ ನೇತೃತ್ವದಲ್ಲಿ ಕಂಬಳ ನಡೆಯುತ್ತಿದೆ. ಕ್ಷೇತ್ರದ ಶಾಸಕರು ಕಂಬಳ ಸಮಿತಿಯ ಅಧ್ಯಕ್ಷರಾಗಿರುವುದು ಇಲ್ಲಿ ವಿಶೇಷ.
ಕಂಬಳದ ಸಂಘಟನೆ ಮತ್ತು ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಪ್ರಸ್ತುತ ಶಾಸಕ ಸುನಿಲ್ ಕುಮಾರ್ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೆರವು ಮುಖ್ಯವಾಗಿದೆ. ಕಂಬಳಕ್ಕೆ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ವರ್ಷದ 12 ತಿಂಗಳೂ ಕೋಣಗಳಿಗೆ ತರಬೇತಿ ನೀಡುವ ವ್ಯವಸ್ಥೆ ಇದೆ.
ಮಿಯ್ಯಾರು ಕಂಬಳದಲ್ಲಿ ಕನೆ ಹಲಗೆ, ಹಗ್ಗ, ನೇಗಿಲು ಮತ್ತು ಅಡ್ಡ ಹಲಗೆ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಇದರ ಜೊತೆಗೆ, ಮೂಡುಬಿದಿರೆ ಕಂಬಳದಂತೆ ಇಲ್ಲಿಯೂ ಅತಿ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವುದು ಗಮನಾರ್ಹ. ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ. ಕಂಬಳದ ಸಂಘಟನೆ ಮತ್ತು ಯಶಸ್ಸಿಗೆ ಸ್ಥಳೀಯರು ಮತ್ತು ಸಮಿತಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.