
ಪುತ್ತಿಗೆ : ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆಯಲ್ಲಿರುವ ಅತ್ಯಂತ ಪುರಾತನವಾದ ಸುಮಾರು 1200 ವರ್ಷದ ಇತಿಹಾಸವಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಜೆ ಈಗ ಕಾಲ ಸನ್ನಿಹಿತವಾಗಿದೆ. ಪ್ರಸಕ್ತ ಪರ್ಯಾಯ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದದೊಂದಿಗೆ ಅವರ ಮಾರ್ಗದರ್ಶನದಲ್ಲಿ, ಊರ ಸಮಸ್ತ ಭಕ್ತ ಜನರ ಸಹಕಾರದೊಂದಿಗೆ ಜೂನ್ 11ರಂದು ಶ್ರೀ ವಿಷ್ಣು ಮೂರ್ತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮ ಜರಗಿತು.

ದೇವಸ್ಥಾನದ ತಂತ್ರಿಗಳಾದ ವೇ.ಮೂ.ಶ್ರೀ ವಾದಿರಾಜ ತಂತ್ರಿಗಳು ಮತ್ತು ಅರ್ಚಕರಾದ ಶ್ರೀ ವಿಷ್ಣು ಮೂರ್ತಿ ಉಪಾಧ್ಯಾಯರವರ ಸಮಕ್ಷಮದಲ್ಲಿ , ಶ್ರೀ ವೇದ ಮೂರ್ತಿ ವಿದ್ವಾನ್ ಶ್ರೀ ಕುಮಾರ ಗುರು ತಂತ್ರಿ ಗಳು ನೆರೆದ ಭಕ್ತರನ್ನುದ್ದೇಶಿಸಿ ಮಾತನಾಡುತ್ತಾ ಜೀರ್ಣೋದ್ಧಾರದಂತಹ ಪುಣ್ಯಪ್ರದ ಕಾರ್ಯಗಳಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬುದವುನ್ನು ನೆರೆದ ಭಕ್ತಜನರಿಗೆ ವಿವರಿಸಿ ಪ್ರಾರ್ಥನೆಯನ್ನು ವಿದ್ಯುಕ್ತವಾಗಿ ಮಾಡಿಸಿದರು.

ತದನಂತರ ನಡೆದ ಸಭೆಯಲ್ಲಿ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜಾಚಾರ್ಯರು ಮಾತನಾಡಿ ಭಕ್ತ ಜನರ ಸಹಕಾರವನ್ನು ಕೋರಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಉಪಾಧ್ಯಾಯ, ಪಳ್ಳಿ ನಟರಾಜ್ ಹೆಗ್ಡೆ, ಪಳ್ಳಿ ರಾಜರಾಮ ಹೆಗ್ಡೆ, ಶಾಂತಾರಾಮ ಪ್ರಭು, ಕುಯಿಲಾಡಿ ಸುರೇಶ್ ನಾಯಕ್, ವಾಸುದೇವ ಭಟ್ ನೆಕ್ಕರ ಪಲ್ಕೆ, ನಾರಾಯಣ ಪೂಜಾರಿ, ಪುತ್ತಿಗೆ ಪ್ರಕಾಶ್ ಶೆಟ್ಟಿ, ಪ್ರವೀಣ್ ಶೇರಿಗಾರ್ , ಅಪ್ಪು ನಾಯಕ್ ಮೊದಲಾದ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಈ ಸಂದರ್ಭದಲ್ಲಿ ಆಗಮಿಸಿ , ಶ್ರೀ ದೇವರ ದರ್ಶನ ಪಡೆದು ತಮ್ಮ ಸಹಕಾರದ ಭರವಸೆಯನ್ನಿತ್ತರು.

