
ಮಂಗಳೂರು: ಕೋಮು ದ್ವೇಷದ ಭಾಷಣ ಮಾಡಿದ ಆರೋಪದ ಮೇರೆಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುತ್ತಾರಿನಲ್ಲಿ ನಡೆದ ಒಂದು ಸಭೆಯಲ್ಲಿ ಸೂಲಿಬೆಲೆ ಅವರು ಹಿಂದೂ ಯುವಕರು ಇತರ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು ಎಂದು ಹೇಳಿದ್ದು, ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.
ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಸೂಲಿಬೆಲೆ ಅವರು ಕೋಮು ದ್ವೇಷದ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವರು ತಮ್ಮ ಭಾಷಣದಲ್ಲಿ, “ನಾವು ಲವ್ ಜಿಹಾದ್ ಮತ್ತು ಮತಾಂತರದ ಬಗ್ಗೆ ಮಾತನಾಡುತ್ತಿದ್ದೇವೆ. ಈಗ ನಾವು ಘರ್ವಾಪ್ಸಿ ಬಗ್ಗೆ ಮಾತನಾಡಬೇಕು. ಇದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ರೀಲ್ಸ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಹರಡಬೇಕು” ಎಂದು ಹೇಳಿದ್ದಾರೆ.
ಇದಲ್ಲದೆ, ಸೂಲಿಬೆಲೆ ಅವರು ಹಿಂದೂ ಸಮಾಜದಲ್ಲಿ ಜನಸಂಖ್ಯಾ ವೃದ್ಧಿಗೆ ಕರೆ ನೀಡಿದ್ದಾರೆ. “ಮೂರು ಮಕ್ಕಳು ಮಾಡಿ, ನಾಲ್ಕು ಮಕ್ಕಳು ಮಾಡಿ ಅಂದ್ರೆ ಕೇಳ್ತೀರಾ ನೀವು. ಆದರೆ, ಮೂರನೇ ಮಗುವಾದರೆ ಇನ್ಕ್ರಿಮೆಂಟ್ ಕೊಡುತ್ತೇನೆ. ಒಂದೂವರೆ ಪಟ್ಟು ಸಂಬಳ ಹೆಚ್ಚು ಮಾಡ್ತೇನೆ. ಮೂರನೇ ಮಗುವಿಗೆ ಶಿಕ್ಷಣದ ಖರ್ಚು ಸಂಪೂರ್ಣ ತನ್ನದೇ ಎಂದು ಒಂದಷ್ಟು ಮಂದಿ ಮುಂದೆ ಬನ್ನಿ. ಹಿಂದೂ ಸಮಾಜದ ರಕ್ಷಣೆಗೆ ಇಷ್ಟು ಮಾಡದಿದ್ದರೆ ಹೇಗೆ? ಬ್ಯುಸಿನೆಸ್ ಮಾಡುವವರು ಈ ರೀತಿಯ ಸಂಕಲ್ಪ ಮಾಡಿ, ನಿಮ್ಮ ಅಂಗಡಿಗೆ ಕೆಲಸಕ್ಕೆ ಬರುವ ಹುಡುಗರಿಗೆ ಹೇಳಿ. ಆಗ ಆತ ಮೂರೇನು ನಾಲ್ಕನೇ ಮಗುವನ್ನು ಹುಟ್ಟಿಸುತ್ತಾನೆ ” ಎಂದು ಸೂಲಿಬೆಲೆ ತಮ್ಮ ಭಾಷಣದಲ್ಲಿ ಸಾರಿದ್ದಾರೆ.
ಸೂಲಿಬೆಲೆ ಅವರ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಇದರ ಪರಿಣಾಮವಾಗಿ ಡಿವೈಎಫ್ಐ ನಾಯಕ ಮುನೀರ್ ಕಾಟಿಪಳ್ಳ ಅವರು ತೀವ್ರ ಪ್ರತಿಕ್ರಿಯಿಸಿದ್ದಾರೆ. ಅವರು, “ಸೂಲಿಬೆಲೆ ಅವರು ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಇದೇ ರೀತಿ, ಎಸ್ಡಿಪಿಐ ನಾಯಕರು ಕೂಡ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸೂಲಿಬೆಲೆ ಅವರ ಭಾಷಣದ ನಂತರ ಸ್ಥಳೀಯ ಮಟ್ಟಿಗೆ ವಿವಾದ ಉಂಟಾಗಿದ್ದು ಪೊಲೀಸರು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.



































