
ಮಂಗಳೂರು : ಬೆಲೆಬಾಳುವ ಕಾರುಗಳ ನೋಂದಣಿಯ ವೇಳೆ ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟ ಉಂಟುಮಾಡಿದ ಆರೋಪದ ಮೇಲೆ, ಮಂಗಳೂರು ಆರ್ಟಿಒ ಕಚೇರಿಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಪ್ರಥಮ ದರ್ಜೆ ಸಹಾಯಕ ನೀಲಪ್ಪ, ಅಧೀಕ್ಷಕಿ ರೇಖಾ ನಾಯಕ್ ಮತ್ತು ಸ್ಥಳೀಯ ಸಹಾಯಕಿ ಸರಸ್ವತಿ ಅಮಾನತುಗೊಂಡವರು. ಇವರ ವಿರುದ್ಧ ಕಾರು ನೋಂದಣಿ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಜವಾದ ಮಾಲೀಕರಿಗೆ ಕಡಿಮೆ ತೆರಿಗೆಯಲ್ಲಿ ನೋಂದಣಿ ಮಾಡಿ ಸರ್ಕಾರದ ಆದಾಯ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಆಧಿಕೃತ ಮಾಹಿತಿಯಂತೆ, ಈ ಮೂರು ಅಧಿಕಾರಿಗಳ ವಿರುದ್ದ ಇಲಾಖಾ ತನಿಖೆ ಪ್ರಾರಂಭವಾಗಿದ್ದು, ವಿಚಾರಣೆಯನ್ನಾಧರಿಸಿ ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಬೇರೆ ಕಚೇರಿಗಳಿಗೆ ವರ್ಗಾಯಿಸಲಾಗಿದೆ.
ಇದರಿಂದ ಮಂಗಳೂರು RTO ಕಚೇರಿಯ ವ್ಯವಸ್ಥೆಯು ಪ್ರಶ್ನೆಯಡಿಗೆ ಸಿಕ್ಕಿದೆ. ಇದಲ್ಲದೆ, ಮೂಲಗಳ ಪ್ರಕಾರ ಆರ್ಟಿಒ ಶ್ರೀಧರ್ ಮಲ್ಲಾಡ್ ಅವರ ವಿರುದ್ಧವೂ ತನಿಖೆ ನಡೆಯುವ ಸಾಧ್ಯತೆ ಇದೆ. ಪ್ರಕರಣದ ಸಂಬಂಧ ಅಧಿಕೃತವಾಗಿ ಇಲಾಖಾ ವಿಚಾರಣೆ ಇನ್ನೂ ನಡೆಯಬೇಕಿದೆ.
ಕಾರ್ಯನಿರ್ವಹಣಾ ಪ್ರಾಮಾಣಿಕತೆಗೆ ಧಕ್ಕೆಯಾಗುವ ಈ ರೀತಿಯ ಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.