
ಮಂಗಳೂರು : ಮಂಗಳೂರಿನಲ್ಲಿ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಸಿದ್ಧಪಡಿಸುವ ಸಂದರ್ಭ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಮತ್ತು ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
2025ರ ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಆರ್. ಕಚೇರಿಗೆ, ದೂರುದಾರನು ತನ್ನ ಹಾಗೂ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಹಾಗೂ ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸರ್ವೆಯರ್ ನಂದೀಶ್ ಅವರು ಏಪ್ರಿಲ್ನಲ್ಲಿ ಸರ್ವೆ ನಡೆಸಿದ ನಂತರ ₹6,500 ನಗದು ಸ್ವತಃ ಸ್ವೀಕರಿಸಿದ್ದರು. ಜೊತೆಗೆ, ₹20,000 ಹಣವನ್ನು ದಲ್ಲಾಳಿ ಬಿಜೆಯ ದಿವಾಕರ್ ಎಂಬವರ ಮೂಲಕ ಪಡೆದುಕೊಂಡಿದ್ದರು.
ಲಂಚದ ಒತ್ತಾಯ ಮುಂದುವರಿದಂತೆ:
ಅದರ ನಂತರ ಸರ್ವೆಯರ್ ನಂದೀಶ್, ಎರಡೂ ಪ್ರದೇಶಗಳ ನಕ್ಷೆ ಹಾಗೂ ಕಾರ್ಡ್ ನೀಡಲು ಇನ್ನೂ ₹18,000 ಹಣ ನೀಡುವಂತೆ ಒತ್ತಾಯಿಸಿದ್ದರು. ಇದರಿಂದ ಅಸಹನೆಗೊಂಡ ದೂರುದಾರರು, ಸ್ಪಷ್ಟ ಸಾಕ್ಷಿಗಳೊಂದಿಗೆ ಮಂಗಳೂರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದಾಗ:
ಈ ತಿಂಗಳಲ್ಲಿ ಮತ್ತೊಮ್ಮೆ ₹15,000 ಹಣವನ್ನು ದಿವಾಕರ್ ಮೂಲಕ ಪಡೆಯಲಾಗಿತ್ತು. ಬುಧವಾರ (ಜೂನ್ 19) ಸರ್ವೆಯರ್ ನಂದೀಶ್ ₹2,000 ಹಣವನ್ನು ದಿವಾಕರ್ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತದ ತಂಡ ದಾಳಿ ನಡೆಸಿ ಇಬ್ಬರನ್ನೂ ಸ್ಥಳದಲ್ಲೇ ಬಂಧಿಸಿತು.
ದಾಳಿ ನಡೆಸಿದ ಅಧಿಕಾರಿಗಳು:
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಮತ್ತು ಚಂದ್ರಶೇಖರ್ ಕೆ.ಎನ್. ಭಾಗವಹಿಸಿದ್ದರು.