
ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿಯ ಪ್ರಮುಖ ನಗರಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೈಗಾರಿಕಾ ಚಟುವಟಿಕೆ ಮತ್ತು ವಾಹನಗಳ ದಟ್ಟಣೆಯಿಂದಾಗಿ ಗಾಳಿಯ ಗುಣಮಟ್ಟ ದಿನೇದಿನೆ ಹದಗೆಡುತ್ತಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಿದೆ.
ಫೆಬ್ರವರಿ 21 ರ ಶನಿವಾರದ ವರದಿಯ ಪ್ರಕಾರ, ಮಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 198 ಕ್ಕೆ ತಲುಪಿದ್ದು, 200 ರ ಗಡಿಗೆ ಬಂದು ನಿಂತಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ 124 ರಷ್ಟಿದ್ದರೆ, ಉಡುಪಿಯಲ್ಲಿ 170 ರಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಈ ನಗರಗಳಲ್ಲಿನ ಗಾಳಿಯು ‘ಅನಾರೋಗ್ಯಕರ’ ಹಂತಕ್ಕೆ ತಲುಪುತ್ತಿದ್ದು, ಶ್ವಾಸಕೋಶದ ಸಮಸ್ಯೆ ಇರುವವರು, ಮಕ್ಕಳು ಹಾಗೂ ವೃದ್ಧರು ಎಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಮಾಲಿನ್ಯ ಹೆಚ್ಚಾದಂತೆ ಉಸಿರಾಟದ ತೊಂದರೆ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯಕೀಯ ವಲಯ ಎಚ್ಚರಿಸಿದೆ.



































