
ಕಾರ್ಕಳ: ಕ್ಷೇತ್ರಕ್ಕೆ ವಿವಿಧ ಸರ್ಕಾರಿ ಕಾಮಗಾರಿಗಳ ಉದ್ಘಾಟನೆಗಾಗಿ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ವಿ. ಸುನಿಲ್ ಕುಮಾರ್ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮುಂಬರುವ 2027ರ ಐತಿಹಾಸಿಕ ಮಹಾಮಸ್ತಕಾಭಿಷೇಕದ ಸಿದ್ಧತೆಗಳ ಕುರಿತು ಸುದೀರ್ಘ ಮನವಿ ಪತ್ರ ಸಲ್ಲಿಸಿದರು.
ಮಹಾಮಸ್ತಕಾಭಿಷೇಕಕ್ಕೆ ಮೂಲಸೌಕರ್ಯಗಳ ಸಿದ್ಧತೆ
ಕಾರ್ಕಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಯಾತ್ರಿಕರಿಗೆ ಅಗತ್ಯವಿರುವ ಸುಸಜ್ಜಿತ ರಸ್ತೆಗಳು, ಶುದ್ಧ ಕುಡಿಯುವ ನೀರು, ನೈರ್ಮಲ್ಯ ಹಾಗೂ ಅಲಂಕಾರಿಕ ದೀಪಗಳ ವ್ಯವಸ್ಥೆಗಾಗಿ ಸರ್ಕಾರವು ತುರ್ತಾಗಿ 75.00 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರು ಒತ್ತಾಯಿಸಿದರು.
ಶೈಕ್ಷಣಿಕ ಸಂಸ್ಥೆಗಳಿಗೆ ಸ್ವಂತ ಕಟ್ಟಡದ ಭಾಗ್ಯ
ಕಾರ್ಕಳದ ಕೆಜಿಟಿಟಿಐ (KGTTI) ತರಬೇತಿ ಕೇಂದ್ರ ಹಾಗೂ ಸರ್ಕಾರಿ ಬಿ.ಎಸ್ಸಿ ನರ್ಸಿಂಗ್ ಕಾಲೇಜುಗಳು ಪ್ರಸ್ತುತ ಬಾಡಿಗೆ ಅಥವಾ ತಾತ್ಕಾಲಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಸಂಸ್ಥೆಗಳಿಗೆ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಸಜ್ಜಿತ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಅಗತ್ಯ ಅನುದಾನ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಗ್ಯ ಕ್ಷೇತ್ರ: ಹೆಬ್ರಿ ಆಸ್ಪತ್ರೆ ಮೇಲ್ದರ್ಜೆಗೆ
ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮೀಣ ಪ್ರದೇಶವಾದ ಹೆಬ್ರಿ ತಾಲೂಕಿನ ಜನರಿಗೆ ಸಮರ್ಪಕ ಚಿಕಿತ್ಸೆ ಒದಗಿಸಲು ಪ್ರಸ್ತುತ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇದರಿಂದ ಬುಡಕಟ್ಟು ಹಾಗೂ ಹಿಂದುಳಿದ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಅಂಬೇಡ್ಕರ್ ಭವನಗಳ ಸಮಗ್ರ ಅಭಿವೃದ್ಧಿ
- ಕಾರ್ಕಳ ಅಂಬೇಡ್ಕರ್ ಭವನ: ಇಂದು ಲೋಕಾರ್ಪಣೆಗೊಂಡ 6.00 ಕೋಟಿ ರೂ. ವೆಚ್ಚದ ಭವನಕ್ಕೆ ಪೀಠೋಪಕರಣ, ಅಡುಗೆ ಪರಿಕರ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚುವರಿ 3.00 ಕೋಟಿ ರೂ. ನೀಡಬೇಕು.
- ಹೆಬ್ರಿ ಅಂಬೇಡ್ಕರ್ ಭವನ: ಹೆಬ್ರಿ ತಾಲೂಕು ಮಟ್ಟದ ಭವನಕ್ಕೆ ಮಂಜೂರಾಗಿರುವ 1.00 ಕೋಟಿ ರೂ. ಅನುದಾನವು ಕಟ್ಟಡ ಪೂರ್ಣಗೊಳಿಸಲು ಸಾಕಾಗುವುದಿಲ್ಲ. ಸಮುದಾಯದ ಬೇಡಿಕೆಯಂತೆ ಇದನ್ನು ಸುಸಜ್ಜಿತಗೊಳಿಸಲು ಕನಿಷ್ಠ 2.00 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಸಮ್ಮುಖದಲ್ಲೇ ಕೋರಲಾಯಿತು.
ಕೈಗಾರಿಕೆ ಮತ್ತು ತಾಂತ್ರಿಕ ಸಮಸ್ಯೆಗಳ ಪರಿಹಾರ
ನಿಟ್ಟೆ ಭಾಗದಲ್ಲಿ ಶಿಗ್ಗಾವಿ ಮಾದರಿಯಲ್ಲೇ ಸರ್ಕಾರಿ ಅನುದಾನದಲ್ಲಿ ‘ಜವಳಿ ಪಾರ್ಕ್’ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು. ಇದರೊಂದಿಗೆ ಕರಾವಳಿಯ ಜ್ವಲಂತ ಸಮಸ್ಯೆಗಳಾದ ಕೆಂಪು ಕಲ್ಲು ಮತ್ತು ಮರಳು ಸಾಗಾಟದ ನಿಯಮಗಳ ಸರಳೀಕರಣ, 9&11ಎ ಖಾತಾ ಸಮಸ್ಯೆ ಹಾಗೂ ಪ್ರಾಧಿಕಾರದ ಅನುಮೋದನೆ ಪ್ರಕ್ರಿಯೆಗಳನ್ನು ಸುಲಭಗೊಳಿಸಿ ಜನಸಾಮಾನ್ಯರಿಗೆ ನೆರವಾಗಬೇಕು ಎಂದು ಶಾಸಕರು ಆಗ್ರಹಿಸಿದರು.



































