
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಸದ್ಯ ರಾಜಕೀಯ ಕೆಸರೆರಚಾಟದ ಕೇಂದ್ರಬಿಂದುವಾಗಿದೆ. ಒಂದು ಕಾಲದಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಬೇಕಿದ್ದ ಈ ತಾಣವು ಇಂದು ಪಾಳುಬಿದ್ದ ಸ್ಥಿತಿಯಲ್ಲಿದ್ದು, ಇದಕ್ಕಿಡೀ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಕುತಂತ್ರವೇ ಕಾರಣ ಎಂದು ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕಾರ್ಕಳದ ಪ್ರವಾಸೋದ್ಯಮದ ಹೆಮ್ಮೆಯಾಗಬೇಕಿದ್ದ ಯೋಜನೆಯನ್ನು ರಾಜಕೀಯ ದ್ವೇಷಕ್ಕಾಗಿ ಬಲಿ ನೀಡಲಾಗಿದೆ. ಉದಯಕುಮಾರ್ ಶೆಟ್ಟಿ ಅವರ ಷಡ್ಯಂತ್ರದಿಂದಾಗಿ ಸುಂದರವಾಗಿದ್ದ ಈ ಬೆಟ್ಟವು ಇಂದು ಕಳ್ಳಕಾಕರ ಹಾಗೂ ಅನೈತಿಕ ಚಟುವಟಿಕೆಗಳ ಅಡ್ಡೆಯಾಗುವ ಭೀತಿ ಎದುರಿಸುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಸಹಿಸಲಾಗದವರು ಇಂತಹ ಕುಕೃತ್ಯಕ್ಕೆ ಕೈ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೈಜ ಜನನಾಯಕನಾದವನು ಹೊಸ ಯೋಜನೆಗಳನ್ನು ತಂದು ನಾಡಿನ ಕೀರ್ತಿ ಹೆಚ್ಚಿಸಬೇಕೇ ಹೊರತು, ಇರುವ ಯೋಜನೆಗಳನ್ನು ಹಳ್ಳ ಹಿಡಿಸಬಾರದು. ಪರಶುರಾಮ ಥೀಮ್ ಪಾರ್ಕ್ಗಿಂತಲೂ ಉತ್ತಮವಾದ ಯೋಜನೆಯನ್ನು ರೂಪಿಸುವ ತಾಕತ್ತು ನಿಮಗಿದ್ದರೆ ಅದನ್ನು ಮಾಡಿ ತೋರಿಸಿ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವುದು ಶೋಭೆಯಲ್ಲ. ನಿಮ್ಮ ರಾಜಕೀಯ ಹಪಾಹಪಿಗೆ ಕಾರ್ಕಳದ ಜನತೆಯ ಹಿತಾಸಕ್ತಿಯನ್ನು ಬಲಿ ಕೊಡಬೇಡಿ” ಎಂದು ರಾಕೇಶ್ ಶೆಟ್ಟಿ ಎಚ್ಚರಿಸಿದ್ದಾರೆ. ಸದ್ಯ ಥೀಮ್ ಪಾರ್ಕ್ ನಿರ್ವಹಣೆಯಿಲ್ಲದೆ ಬರಡು ಭೂಮಿಯಂತೆ ಗೋಚರಿಸುತ್ತಿದ್ದು, ಇದಕ್ಕೆ ಕಾರಣರಾದವರು ಸಾರ್ವಜನಿಕರಿಗೆ ಉತ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.



































