
ಕಾರ್ಕಳ: ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯ 35ನೇ ವರ್ಷದ ವಾರ್ಷಿಕೋತ್ಸವ ಹಾಗೂ 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಮತ್ತು ಕಿಸಾನ್ ಸಭಾಂಗಣದ ಉದ್ಘಾಟನಾ ಸಮಾರಂಭವು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಿತು.
ಬಡ ಮಕ್ಕಳ ಏಳಿಗೆಯೇ ನಮ್ಮ ಗುರಿ – ವೀರಪ್ಪ ಮೊಯ್ಲಿ: ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು, “ನಮ್ಮ ಸಂಸ್ಥೆಯಲ್ಲಿ ಅನಗತ್ಯ ದುಂದು ವೆಚ್ಚಕ್ಕೆ ಅವಕಾಶವಿಲ್ಲ. ಬಡವರ ಮಕ್ಕಳನ್ನು ಬೆಳೆಸುವುದೇ ನಮ್ಮ ಏಕೈಕ ಗುರಿ. ಇಲ್ಲಿ ದಾಖಲಾಗುವ ಮಕ್ಕಳು ನಿರ್ಗತಿಕರಾಗಿರಬೇಕು ಮತ್ತು ಯಾವುದೇ ಡೊನೇಷನ್ ಪಡೆಯುವ ಕ್ರಮ ನಮ್ಮಲ್ಲಿಲ್ಲ. ಕನಿಷ್ಠ 35 ಅಂಕ ಪಡೆದ ಅಥವಾ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಅಂತಹ ಮಕ್ಕಳನ್ನು 90 ಅಂಕ ಪಡೆಯುವಂತೆ ಸಿದ್ಧಪಡಿಸುವುದು ನಮ್ಮ ಸಂಸ್ಥೆಯ ಶ್ರಮ,” ಎಂದರು. ಅಲ್ಲದೆ, ತಮ್ಮ ವಕೀಲ ವೃತ್ತಿಯಿಂದ ರಾಜಕಾರಣದವರೆಗಿನ ಕಷ್ಟದ ಹಾದಿಯನ್ನು ಸ್ಮರಿಸಿದರು.
ಶಿಕ್ಷಣಕ್ಕೆ ಯಾವುದೇ ಮಿತಿ ಇಲ್ಲ – ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, “ಎಲ್ಲಾ ಇಲಾಖೆಗಳಿಗೆ ಒಂದು ವ್ಯಾಪ್ತಿ ಇರುತ್ತದೆ, ಆದರೆ ಶಿಕ್ಷಣ ಇಲಾಖೆಗೆ ಯಾವುದೇ ಮಿತಿಯಿಲ್ಲ. ಕಟ್ಟಕಡೆಯ ಮಗುವಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ,” ಎಂದು ಭರವಸೆ ನೀಡಿದರು.
ಅಭಿವೃದ್ಧಿ ಎಂದರೆ ಕೇವಲ ರಸ್ತೆಯಲ್ಲ – ಲಕ್ಷ್ಮೀ ಹೆಬ್ಬಾಳ್ಕರ್: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, “ವೀರಪ್ಪ ಮೊಯ್ಲಿ ಅವರ ಜೀವನದ ಯಶೋಗಾಥೆ ನಮಗೆಲ್ಲರಿಗೂ ಸ್ಫೂರ್ತಿ. ಕೇವಲ ರಸ್ತೆ, ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲ; ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣವೇ ನಿಜವಾದ ಅಭಿವೃದ್ಧಿ,” ಎಂದರು. ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಸುನಿಲ್ ಕುಮಾರ್ ಮನವಿ: ಶಾಸಕ ವಿ. ಸುನಿಲ್ ಕುಮಾರ್ ಅವರು ವೀರಪ್ಪ ಮೊಯ್ಲಿ ಅವರ 50 ವರ್ಷಗಳ ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿದರು. ಇದೇ ವೇಳೆ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಕಾರ್ಕಳದ ಮಹಾ ಮಸ್ತಕಾಭಿಷೇಕಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಹೆಬ್ರಿ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಮತ್ತು ಜಿಲ್ಲೆಯ 9/11 ಹಾಗೂ ಕೆಂಪು ಕಲ್ಲು ಹೊಯಿಗೆ ಕೆಲಸದ ಸಮಸ್ಯೆಗಳನ್ನು ಸಡಿಲಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಹಂತ ಹಂತವಾಗಿ ಬೇಡಿಕೆ ಈಡೇರಿಕೆ – ಸಿಎಂ ಸಿದ್ದರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, “ನಮ್ಮದು ನುಡಿದಂತೆ ನಡೆದ ಸರ್ಕಾರ. ಉದಯ ಕುಮಾರ್ ಶೆಟ್ಟಿ ಹಾಗೂ ಸುನಿಲ್ ಕುಮಾರ್ ಅವರು ನೀಡಿದ ಮನವಿಗಳನ್ನು ಒಮ್ಮೆಗೆ ಈಡೇರಿಸಲು ಸಾಧ್ಯವಾಗದಿದ್ದರೂ, ಹಂತ ಹಂತವಾಗಿ ಖಂಡಿತವಾಗಿ ಪೂರೈಸಲಾಗುವುದು. ಮಸ್ತಕಾಭಿಷೇಕಕ್ಕೆ ಸರ್ಕಾರದ ಸಂಪೂರ್ಣ ಸಹಕಾರವಿರುತ್ತದೆ,” ಎಂದರು. ಮೊಯ್ಲಿ ಅವರ ಕಷ್ಟದ ಜೀವನ ಮತ್ತು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಇತರರಿಗೆ ಮಾದರಿ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು



































