
ಬೆಂಗಳೂರು: ಹಿರಿಯ ಶ್ರೇಣಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌಡ್ಗಿಲ್ ಅವರಿಗೆ ರಾಜ್ಯ ಸರಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ಬಡ್ತಿ ನೀಡಿದೆ.
ರೂಪಾ ಮೌಡ್ಗಿಲ್ ಅವರು ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಡ್ತಿಯಲ್ಲಿ ವಿಳಂಬವಾಗಿರುವುದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸರಕಾರ ತನ್ನನ್ನು ADGP ಹುದ್ದೆಗೆ ಪ್ರಾಮಾಣಿಕವಾಗಿ ಬಡ್ತಿ ನೀಡಬೇಕು ಎಂದು ಅವರು ಹೈಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ಹೈಕೋರ್ಟ್ ಎಪ್ರಿಲ್ 25ರಂದು ವಿಚಾರಣೆ ನಡೆಸಿ, ಈ ವಿಚಾರವನ್ನು ಮುಂದಿನ 2 ತಿಂಗಳ ಒಳಗಾಗಿ ಕಾನೂನಿನಂತೆ ತೀರ್ಮಾನಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಅವಧಿಯಲ್ಲಿ ಅವರು ತಾವು ಈಗಿರುವ ಹುದ್ದೆಯಲ್ಲೇ ಮುಂದುವರಿಯಬೇಕು ಎಂದು ಕೂಡ ನ್ಯಾಯಾಲಯ ತಿಳಿಸಿತ್ತು.
ಡಿ.ರೂಪಾ 2000ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದು, ಕಳೆದ 22 ವರ್ಷಗಳಿಂದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರದಿಂದ ನೀಡಲಾದ ಈ ಬಡ್ತಿಯಿಂದ ಅವರು ಇನ್ನಷ್ಟು ಜವಾಬ್ದಾರಿಯುತ ಸ್ಥಾನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.