
ಬೆಂಗಳೂರು: “ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ” ಎಂಬ ನಟ ಕಮಲ್ ಹಾಸನ್ ಹೇಳಿಕೆಯಿಂದ ಕನ್ನಡಿಗರ ಕೋಪ ಇನ್ನೂ ಹೆಚ್ಚಾಗಿದ್ದು, ಅವರ ಹೊಸ ಚಿತ್ರ ‘ಥಗ್ ಲೈಫ್’ ಬಿಡುಗಡೆ ಗೊಂದಲದಲ್ಲಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುವಂತಹ ಮಾತುಗಳನ್ನು ಆಡಿದ ಕಮಲ್ ಹಾಸನ್ ಕ್ಷಮೆ ಕೇಳದೇ ಇರುವುದು ವಿರೋಧವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರ ಸಾ.ರಾ. ಗೋವಿಂದು, “ಕಮಲ್ ಹಾಸನ್ ಕ್ಷಮೆ ಕೇಳದೇ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಭಾಷೆಯ ವಿಷಯದಲ್ಲಿ ನಾವು ಯಾವ ಹೋರಾಟಕ್ಕೂ ಹಿಂದೆ ಹೋಗೋಲ್ಲ. ಕನ್ನಡದ ಅಭಿಮಾನದ ಪ್ರಶ್ನೆ ಇದು” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿ “ಇತಿಹಾಸದಲ್ಲಿ ಹಲವರು ತಪ್ಪು ಹೇಳಿಕೆ ಕೊಟ್ಟು ಕ್ಷಮೆ ಕೇಳಿ ಸಮಸ್ಯೆ ಬಗೆಹರಿಸಿದ್ದಾರೆ. ಆದರೆ ಕಮಲ್ ಹಾಸನ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದು ಅವರ ಚಿತ್ರವಷ್ಟೆ ಅಲ್ಲ, ನಮ್ಮ ಭಾಷೆಯ ವಿಷಯ. ನಾವು ಯಾವುದೇ ಅಪಮಾನವನ್ನು ಸಹಿಸಲ್ಲ” ಎಂದು ಉಗ್ರವಾಗಿ ಎಚ್ಚರಿಸಿದರು.
ಇದರಿಂದ ‘ಥಗ್ ಲೈಫ್’ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ವಿಷಯ ದಿನದಿಂದ ದಿನಕ್ಕೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದು, ರಾಜ್ಯಾದ್ಯಂತ ಕನ್ನಡ ಅಭಿಮಾನಿಗಳು ತಮ್ಮ ವಿರೋಧವನ್ನು ತೀವ್ರಗೊಳಿಸುತ್ತಿರುವುದು ಗಮನಾರ್ಹವಾಗಿದೆ.