
ಹಿರಿಯಡಕ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾಥಮಿಕ ವಿಭಾಗದ “ಭವಾನಿ ಚಂದಯ್ಯ ಹೆಗ್ಡೆ” ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವು ಗುರುವಾರ ಶಾಲಾ ಆವರಣದಲ್ಲಿ ಅತ್ಯಂತ ಸಡಗರದಿಂದ ನೆರವೇರಿತು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. “ಹಿಂದೆ ಶಿಕ್ಷಣವು ಸಾಮಾನ್ಯರಿಗೆ ಎಟುಕದ ಕಾಲದಲ್ಲಿ ಚಂದಯ್ಯ ಹೆಗ್ಡೆಯವರು ಈ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಉದಾತ್ತ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದರು. ಇಂದು ಅವರ ಕುಟುಂಬಸ್ಥರು ತಾಯಿ ಭವಾನಿ ಚಂದಯ್ಯ ಹೆಗ್ಡೆಯವರ ಹೆಸರಿನಲ್ಲಿ ನೂತನ ಕಟ್ಟಡಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಿದ್ದಾರೆ. ನಾವೆಲ್ಲರೂ ಒಗ್ಗೂಡಿ ಶಿಕ್ಷಣದ ರಥವನ್ನು ಮುನ್ನಡೆಸೋಣ, ಈ ಶಾಲೆ ರಾಜ್ಯಕ್ಕೇ ಮಾದರಿಯಾಗಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, “ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಕಾಲದಲ್ಲಿ, ಹಿರಿಯಡಕ ಕೆಪಿಎಸ್ ಶಾಲೆಯಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವುದು ಹೆಮ್ಮೆಯ ವಿಷಯ. ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಶಾಲೆಗೆ ನನ್ನಿಂದಾದ ವೈಯಕ್ತಿಕ ಸಹಕಾರ ನೀಡುವುದಾಗಿ” ಭರವಸೆ ನೀಡಿದರು.

ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬೆಂಗಳೂರಿನ ಎ. ಬಾಲಕೃಷ್ಣ ಹೆಗ್ಡೆ ಅವರು ತಮ್ಮ ಕುಟುಂಬದ ಪರವಾಗಿ ಮಾತೃಶ್ರೀ ಭವಾನಿ ಚಂದಯ್ಯ ಹೆಗ್ಡೆ ಹೆಸರಿನ ಕಟ್ಟಡಕ್ಕೆ 1 ಕೋಟಿ ರೂ.ಗಳ ಬೃಹತ್ ದೇಣಿಗೆಯನ್ನು ಅಧಿಕೃತವಾಗಿ ಘೋಷಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಗೌರವ ಸಲಹೆಗಾರ ಡಾ. ಎನ್. ಎಸ್. ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಾಗರಾಜೇಂದ್ರ ಎಂ.ಆರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಶರತ್ಚಂದ್ರ ಜೆನ್ನಿ, ಕೋಶಾಧಿಕಾರಿ ದಿವಾಕರ ಭಂಡಾರಿ, ಪ್ರಾಂಶುಪಾಲ ಮಂಜುನಾಥ್ ಭಟ್, ಎಸ್ಡಿಎಂಸಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಹಿರಿಯ ಶಿಕ್ಷಕ ವಿಜಯ್ ಕುಮಾರ್, ಮತ್ತು ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕಿ ಪ್ರೇಮಲತಾ ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಳಿನಾ ದೇವಿ ಎಂ.ಆರ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.





































