
ಗುಜರಾತ್ ರಾಜ್ಯದ ಭಾವ್ನಗರದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ವಿವಾಹ ಬಂಧನಕ್ಕೆ ಒಳಗಾಗಬೇಕಿದ್ದ ವರನೇ, ಮದುವೆ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಸೀರೆ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದ ವಧುವನ್ನು ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ.
ಪ್ರೀತಿಸಿದವನ ಕೈಯಿಂದಲೇ ಸಾವು
ಮೃತ ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್ ಹಾಗೂ ಹತ್ಯೆ ಮಾಡಿದ ವರನ ಹೆಸರು ಸಜನ್ ಬರಯ್ಯ. ಸೋನಿ ಮತ್ತು ಸಜನ್ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಇಬ್ಬರೂ ಸುಮಾರು 1.5 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅಂತಿಮವಾಗಿ ಕುಟುಂಬದ ಒಪ್ಪಿಗೆ ಪಡೆದು ವಿವಾಹಕ್ಕೆ ದಿನ ನಿಶ್ಚಯಿಸಲಾಗಿತ್ತು. ವಿವಾಹದ ಎಲ್ಲ ಸಂಪ್ರದಾಯಗಳು ಈಗಾಗಲೇ ಮುಗಿದಿದ್ದವು. ನೆನ್ನೆ ನಡೆಯಬೇಕಿದ್ದ ಮದುವೆಗೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ ಈ ಘಟನೆ ನಡೆದಿದೆ.
ಸೀರೆ ಖರೀದಿ ಜಗಳ ಕೊಲೆಯಲ್ಲಿ ಅಂತ್ಯ
ಮಾಹಿತಿಗಳ ಪ್ರಕಾರ, ಮದುವೆಗೆಂದು ಸೀರೆ ಖರೀದಿಸುವಾಗ ಹಣ ಹಾಗೂ ಸೀರೆಯ ಆಯ್ಕೆ ವಿಷಯದಲ್ಲಿ ಸೋನಿ ಮತ್ತು ಸಜನ್ ನಡುವೆ ತೀವ್ರ ಜಗಳ ನಡೆದಿದೆ. ಜಗಳವು ಎಷ್ಟು ಉಲ್ಬಣಿಸಿತು ಎಂದರೆ, ಮನೆಗೆ ಮರಳಿದ ನಂತರ ಸಜನ್ ತನ್ನ ಕೋಪವನ್ನು ನಿಯಂತ್ರಿಸಲಾಗದೆ, ವಧು ಸೋನಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯಿಂದ ಸೋನಿಯ ತಲೆಗೆ ಗಂಭೀರವಾದ ಪೆಟ್ಟು ಬಿದ್ದು, ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ಸಾರ್ವಜನಿಕ ಅಶಾಂತಿ ಮತ್ತು ಪ್ರಕರಣ ದಾಖಲು
ವಧುವಿನ ಹತ್ಯೆಯ ನಂತರವೂ ವರ ಸಜನ್ನ ಆಕ್ರೋಶ ತಣ್ಣಗಾಗಿಲ್ಲ. ಆತ ನೆರೆಹೊರೆಯವರೊಂದಿಗೆ ಜಗಳ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನೂ ಧ್ವಂಸಗೊಳಿಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ಭಾವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ವಧುವಿನ ಪರವಾಗಿ ಸಜನ್ ಬರಯ್ಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಬೇಕಿದ್ದ ಜೋಡಿಯ ದುರಂತ ಅಂತ್ಯ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮತ್ತು ವಿಷಾದವನ್ನು ಉಂಟುಮಾಡಿದೆ.




































