
ಬೆಂಗಳೂರು: ದಾಂಪತ್ಯ ಜೀವನದಲ್ಲಿ ಸಂಗಾತಿಯ ಮೇಲಿನ ಆಸಕ್ತಿ ಕಡಿಮೆಯಾಗಿದೆ ಎಂಬ ಏಕೈಕ ಕಾರಣಕ್ಕೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಒಪ್ಪಂದವಲ್ಲ, ಬದಲಿಗೆ ಅದು ಪವಿತ್ರವಾದ ಸಂಸ್ಕಾರವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮೈಸೂರಿನ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿಯೊಬ್ಬ ಸಲ್ಲಿ ಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ನಿರ್ಧಾರವನ್ನು ಪ್ರಕಟಿಸಿದೆ. ಕೌಟುಂಬಿಕ ನ್ಯಾಯಾಲಯದ ನಿರ್ಧಾರದಲ್ಲಿ ಯಾವುದೇ ಲೋಪವಿಲ್ಲ ಎಂದು ತಿಳಿಸಿದ ಹೈಕೋರ್ಟ್, ಪತಿಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಮುಖ್ಯ ಅಂಶಗಳು
- ಸಂಸ್ಕಾರದ ಸಂಕೇತ: ಹಿಂದೂ ಚೌಕಟ್ಟಿನಲ್ಲಿ ವಿವಾಹವು ಪವಿತ್ರ ಸಂಸ್ಕಾರವಾಗಿದ್ದು, ಕೇವಲ ತಾತ್ಕಾಲಿಕ ಇಷ್ಟಕಷ್ಟಗಳ ಮೇಲೆ ನಿರ್ಧಾರವಾಗುವುದಿಲ್ಲ.
- ತಪ್ಪಿನ ಲಾಭ ಪಡೆಯುವಂತಿಲ್ಲ: ಪ್ರೀತಿಸಿ ಮದುವೆಯಾಗಿ, ವಯಸ್ಕ ಮಗಳಿದ್ದರೂ ಈಗ ಆಸಕ್ತಿ ಇಲ್ಲವೆಂದು ಹೇಳುವುದು ತನ್ನದೇ ತಪ್ಪಿನ ಲಾಭ ಪಡೆಯುವ ಯತ್ನ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
- ಆದೇಶ ಎತ್ತಿಹಿಡಿಯುವಿಕೆ: ಮೈಸೂರು ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಉಚ್ಚ ನ್ಯಾಯಾಲಯ.
ವಿಚಾರಣೆ ವೇಳೆ ಪೀಠವು, ಪ್ರೇಮ ವಿವಾಹವಾಗಿ ಮಗಳ ತಂದೆಯಾದ ಬಳಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಪತಿಯ ನಡವಳಿಕೆಯನ್ನು ಖಂಡಿಸಿತು. ದಾಂಪತ್ಯದಲ್ಲಿ ಅಡಚಣೆಗಳು ಬಂದಾಗ ಒಟ್ಟಾಗಿ ಸಾಗಬೇಕೇ ವಿನಃ ಆಸಕ್ತಿ ಇಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆಯಿಂದ ಹೊರಬರಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ಖಡಕ್ಕಾಗಿ ತಿಳಿಸಿದೆ.




































