
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ತನಿಖೆಯು ಈಗ ರಾಜಕೀಯ ವಾಗ್ವಾದದ ಕೇಂದ್ರಬಿಂದುವಾಗಿದೆ. ವಿಧಾನಸಭೆಯ ಕಲಾಪದಲ್ಲಿ ಈ ವಿಷಯದ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ಶಾಸಕ ವಿ. ಸುನಿಲ್ ಕುಮಾರ್, ತನಿಖೆಯ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಆಗುತ್ತಿರುವ ಅವಮಾನದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು.
ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾದೀತೆಂಬ ಆತಂಕ:
ಸೋಮವಾರ ಶೂನ್ಯವೇಳೆಯಲ್ಲಿ ಮಾತನಾಡಿದ ವಿ. ಸುನಿಲ್ ಕುಮಾರ್, ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ತನಿಖೆಗಾಗಿ ಎಸ್ಐಟಿ ರಚನೆಯನ್ನು ನಾವು ಸ್ವಾಗತಿಸುತ್ತೇವೆ. ಸತ್ಯ ಹೊರಬರಬೇಕು ಎಂಬುದು ನಮ್ಮೆಲ್ಲರ ಆಶಯ. ಆದರೆ, ಕಳೆದ 12-13 ದಿನಗಳಿಂದ ತನಿಖೆಯ ನೆಪದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ವ್ಯಕ್ತಿಗಳ ಹೇಳಿಕೆಗಳು ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡಿವೆ. ಇದು ಭಕ್ತರ ನಂಬಿಕೆ ಮತ್ತು ಶ್ರದ್ಧೆಗಳಿಗೆ ದೊಡ್ಡ ಆಘಾತ ಉಂಟುಮಾಡಿದೆ ಎಂದು ಅವರು ಹೇಳಿದರು. ಈಗಾಗಲೇ 15-16 ಗುಂಡಿಗಳನ್ನು ಅಗೆದಿದ್ದರೂ ಯಾವುದೇ ನಿರ್ದಿಷ್ಟ ಸುಳಿವು ಸಿಕ್ಕಿಲ್ಲ. ಈ ಕುರಿತು ಸರ್ಕಾರ ಊಹಾಪೋಹಗಳಿಗೆ ತೆರೆ ಎಳೆಯಬೇಕು. ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ತನಿಖೆ ಬೇರೆ ದಿಕ್ಕಿಗೆ ಹೋಗುವುದನ್ನು ತಡೆಯಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಗೃಹ ಸಚಿವರ ಸಮಜಾಯಿಷಿ:
ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಧರ್ಮಸ್ಥಳದ ಜನಸಮುದಾಯದ ಒತ್ತಾಯ ಮತ್ತು ಬಂದ ದೂರಿನ ಮೇರೆಗೆ ಜುಲೈ 19 ರಂದು ಎಸ್ಐಟಿ ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ನೂರಾರು ಗುಂಡಿಗಳನ್ನು ಅಗೆಯಲು ಸಾಧ್ಯವಿಲ್ಲ. ತನಿಖೆಗೆ ಒಂದು ಕಾಲಮಿತಿ ಇರುತ್ತದೆ. ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಎಸ್ಐಟಿ ವರದಿಯನ್ನು ಸಲ್ಲಿಸುತ್ತದೆ. ಆಗ ಸರ್ಕಾರ ಸಮಗ್ರ ಮಾಹಿತಿಯನ್ನು ಸದನಕ್ಕೆ ನೀಡುತ್ತದೆ ಎಂದು ಪರಮೇಶ್ವರ್ ಹೇಳಿದರು.
ಆಡಳಿತ-ವಿಪಕ್ಷಗಳ ನಡುವೆ ಜಟಾಪಟಿ:
ಚರ್ಚೆಯ ವೇಳೆ, ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಎಸ್ಡಿಪಿಐ ಮತ್ತು ಎಡಪಂಥೀಯ ಸಂಘಟನೆಗಳ ಒತ್ತಡದಿಂದ ಎಸ್ಐಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾಗಿ ಗಮನ ಸೆಳೆದರು. ಇದಕ್ಕೆ ದನಿಗೂಡಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಅನಾಮಿಕ ವ್ಯಕ್ತಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. ನಂತರ ಮಧ್ಯಪ್ರವೇಶಿಸಿದ ದಿನೇಶ್ ಗುಂಡೂರಾವ್, ನಾವು ಯಾವುದೇ ಪಕ್ಷದ ಪರವಾಗಿಲ್ಲ, ಸತ್ಯ ಮತ್ತು ನ್ಯಾಯದ ಪರವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.