
ಬೆಳ್ತಂಗಡಿ: ಧರ್ಮಸ್ಥಳ ಸುತ್ತಮುತ್ತ ನಡೆದ ಹತ್ತಾರು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾನೇ ಹೆಣಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೊಂಡಿದ್ದ ಅನಾಮಿಕ ವ್ಯಕ್ತಿಯೊಬ್ಬರು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ಧರ್ಮಸ್ಥಳ ಗ್ರಾಮದ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಿ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬರು ಧರ್ಮಸ್ಥಳದ ಅಪರಾಧಗಳ ಕುರಿತು ಪತ್ರ ಬರೆದು ಸಂಚಲನ ಮೂಡಿಸಿದ್ದು ಹೌದು. ಈ ಕುರಿತು TimesNow ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸಚಿವೆ ಅನ್ನಪೂರ್ಣ ದೇವಿ, “ಧರ್ಮಸ್ಥಳದಲ್ಲಿ 1995 ರಿಂದ 2014 ರವರೆಗೆ ಈ ರೀತಿಯ ಘಟನೆಗಳು ದೀರ್ಘಕಾಲದವರೆಗೆ ನಡೆದಿರುವುದು ಅಚ್ಚರಿ ತಂದಿದೆ. ಇದುವರೆಗೆ ಯಾರಿಗೂ ಈ ಬಗ್ಗೆ ತಿಳಿಯದಿರುವುದು ನಿಜಕ್ಕೂ ಗಂಭೀರವಾದ ವಿಷಯ” ಎಂದು ಹೇಳಿದ್ದಾರೆ.
ಇದಲ್ಲದೆ, “ಈಗ ಅನಾಮಧೇಯ ವ್ಯಕ್ತಿ ಈ ಕುರಿತ ಮಾಹಿತಿ ಬಹಿರಂಗಪಡಿಸಿದ್ದಾರೆ. ಕರ್ನಾಟಕ ಸರ್ಕಾರವು ಮಾಹಿತಿ ನೀಡಿದ ಸಾಕ್ಷಿಗೆ ರಕ್ಷಣೆ ನೀಡಬೇಕು. ಈ ವಿಷಯದ ಬಗ್ಗೆ ಸಂಪೂರ್ಣ ಮತ್ತು ವಿಸ್ತೃತವಾದ ತನಿಖೆ ನಡೆಸಬೇಕು. ತಕ್ಷಣವೇ ತನಿಖೆ ಕೈಗೊಳ್ಳಬೇಕು” ಎಂದು ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.