
ಅಥಣಿ: ಡಿಸೆಂಬರ್ ತಿಂಗಳಲ್ಲಿ ನನಗೆ ಶುಕ್ರದೆಸೆ ಪ್ರಾರಂಭವಾಗುತ್ತದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರು ಪುನರುಚ್ಚರಿಸಿದ್ದಾರೆ. ಆದರೆ, ಅದು ಸಚಿವ ಸ್ಥಾನವೋ ಅಥವಾ ಉಪಮುಖ್ಯಮಂತ್ರಿ (DCM) ಸ್ಥಾನವೋ ಎಂಬುದು ಹೇಳುವುದಕ್ಕೆ ಬರುವುದಿಲ್ಲ ಎಂದು ಕುತೂಹಲ ಉಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, “ಆ ಕುತೂಹಲ ಎಲ್ಲರಿಗೂ ಹಾಗೆ ಇರಬೇಕು. ಈಗಲೇ ಎಲ್ಲವನ್ನೂ ಹೇಳಿದರೆ ಯಾವ ಅರ್ಥವೂ ಉಳಿಯಲ್ಲ. ಸಂದರ್ಭ ಬಂದಾಗ ಎಲ್ಲ ಗೊತ್ತಾಗುತ್ತದೆ. ಡಿಸೆಂಬರ್ ತಿಂಗಳು ಕಳೆದ ಬಳಿಕ 2026 ಬರುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ,” ಎಂದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಕುರಿತು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ
ತಾವು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (BDCC) ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವ ಊಹಾಪೋಹಗಳ ಕುರಿತು ಸವದಿ ಸ್ಪಷ್ಟನೆ ನೀಡಿದರು.
“ಸಹಕಾರಿ ಸಚಿವನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ನನಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ಗೆ ಅಧ್ಯಕ್ಷನಾಗುವ ಭ್ರಮೆ ಇಲ್ಲ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆಂದು ನಾನು ಎಲ್ಲಿಯೂ ಹೇಳಿಲ್ಲ. ಅಪೇಕ್ಷಿತನೂ ಅಲ್ಲ,” ಎಂದು ಅವರು ನುಡಿದರು.
ಸಹಕಾರಿ ರಂಗದಲ್ಲಿ ಕಳೆದ 30 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ತಮಗೆ ಯಾವುದೇ ಕಾರಣಕ್ಕೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಅಪೇಕ್ಷೆ ಇಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ಜೊತೆಗೆ, ಇನ್ನೂ 4 ಕ್ಷೇತ್ರಗಳ ಫಲಿತಾಂಶ ನ್ಯಾಯಾಲಯದಲ್ಲಿ ಬಾಕಿಯಿರುವುದರಿಂದ, ಕೋರ್ಟ್ನಿಂದ ತೀರ್ಪು ಬಂದ ನಂತರ ಫಲಿತಾಂಶ ಘೋಷಣೆಯಾಗುತ್ತದೆ ಎಂದು ಅವರು ತಿಳಿಸಿದರು.



































