
ಕೊಪ್ಪಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ದು, ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯಾವುದೇ ದೂರದೃಷ್ಟಿಯ ಯೋಜನೆಗಳನ್ನು ಹೊಂದಿಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಅವರು ಗಂಭೀರವಾಗಿ ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಯುವಜನತೆಯ ನಿರುದ್ಯೋಗ ಸಮಸ್ಯೆ ನಿವಾರಣೆ, ಕೃಷಿ ಸಂಕಷ್ಟದ ಪರಿಹಾರ, ಶಿಕ್ಷಣ ಗುಣಮಟ್ಟದ ಸುಧಾರಣೆ ಮತ್ತು ನೀರಾವರಿ ಯೋಜನೆಗಳ ವಿಸ್ತರಣೆಗೆ ಬಜೆಟ್ನಲ್ಲಿ ಆದ್ಯತೆ ನೀಡಿಲ್ಲ. ದೇಶದ ಭವಿಷ್ಯ ರೂಪಿಸಬೇಕಾದ ಕ್ಷೇತ್ರಗಳನ್ನೇ ನಿರ್ಲಕ್ಷಿಸಲಾಗಿದೆ. ಘೋಷಿಸಲಾದ 3 ಹೊಸ ಏಮ್ಸ್ (AIIMS) ವೈದ್ಯಕೀಯ ಸಂಸ್ಥೆಗಳು ಕೇವಲ ಉತ್ತರ ಭಾರತದ ಪಾಲಾಗಿವೆ. ಕರ್ನಾಟಕದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂಬ ದಶಕಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನದ ಘೋಷಣೆಯಾಗಿಲ್ಲ. ಹೈ ಸ್ಪೀಡ್ ರೈಲ್ ಕಾರಿಡಾರ್ ಯೋಜನೆಯಲ್ಲಿ ಬೆಂಗಳೂರು ಮತ್ತು ಮುಂಬೈ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಕೈಬಿಟ್ಟಿರುವುದು ಆರ್ಥಿಕ ಮತ್ತು ವ್ಯಾಪಾರ ವೃದ್ಧಿಯ ದೃಷ್ಟಿಯಿಂದ ದೊಡ್ಡ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಸಾಲದ ಮೊತ್ತವನ್ನು ಮಿತಿಮೀರಿ ಹೆಚ್ಚಿಸುತ್ತಿದೆ. 2025-26ರಲ್ಲಿ 15,68,958 ಕೋಟಿ ರೂಪಾಯಿಗಳಷ್ಟಿದ್ದ ಸಾಲದ ಪ್ರಮಾಣ, 2026-27ನೇ ಸಾಲಿನಲ್ಲಿ 17,20,000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಇದು ದೇಶದ ಒಟ್ಟು ಜಿಡಿಪಿಯ 56 ಪ್ರತಿಶತದಷ್ಟಾಗುತ್ತಿದ್ದು, ದೇಶವನ್ನು ಸಾಲದ ಸುಳಿಗೆ ದೂಡುತ್ತಿದೆ. ವಿತ್ತೀಯ ಕೊರತೆಯು ಸತತವಾಗಿ ಏರುತ್ತಿರುವುದು ಆರ್ಥಿಕ ಅಸ್ಥಿರತೆಗೆ ದಾರಿಯಾಗಲಿದೆ ಎಂದು ರಾಯರಡ್ಡಿ ಎಚ್ಚರಿಸಿದ್ದಾರೆ.



































