
ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನಗಳ ನೋಂದಣಿ ಮಾಡಿಸಿ ನೂರಾರು ಗ್ರಾಹಕರಿಗೆ ವಂಚಿಸಿದ ಗಂಭೀರ ಆರೋಪದಡಿ ಬೆಂಗಳೂರಿನ ಸಿಸಿಬಿ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಿಟಿಎಂ ಲೇಔಟ್ನ ಹಿಂದಿನ ಉಪ-ನೋಂದಣಾಧಿಕಾರಿ ರೂಪಾ ಮತ್ತು ‘ನವಯುಗ ಪ್ರಾಪರ್ಟಿಸ್’ನ ಪಾಲುದಾರ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ನಕಲಿ ಕ್ರಯಪತ್ರದಿಂದ ವಂಚನೆ
ಆರೋಪಿಗಳು ಇತರೆ 38 ಮಂದಿಯೊಂದಿಗೆ ಸೇರಿಕೊಂಡು ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ, ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂಬರ್ 5/2 ರಲ್ಲಿರುವ 40 ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿದ್ದರು. ಈ ಪೈಕಿ ಎರಡು ನಿವೇಶನಗಳ ಮಾಲೀಕರು ಇಲ್ಲದಿದ್ದರೂ ನಕಲಿ ನೋಂದಣಿ ನಡೆದಿರುವುದು ಬೆಳಕಿಗೆ ಬಂದಿದೆ.
ದೂರುದಾರ ಮುಕುಂದ ಎಂಬುವರಿಗೆ ಸೇರಿದ್ದ ಜಮೀನಿಗೆ ಸಂಬಂಧಿಸಿದಂತೆ, ಅವರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿದ್ದ ಆಸ್ತಿಯನ್ನು, ಗಣೇಶ್ ಎಂಬಾತ ತಾನೇ ನಾಗರಾಜ್ ಶೆಟ್ಟಿ ಪುತ್ರ ಎಂದು ಬಿಂಬಿಸಿ ನಕಲಿ ದಾಖಲೆ ಸೃಷ್ಟಿಸಿ ಕ್ರಯ ಪತ್ರ ಮಾಡಿಸಿದ್ದ. ಆದರೆ, ತನಿಖೆ ವೇಳೆ ನಾಗರಾಜ್ ಶೆಟ್ಟಿ ಅವರಿಗೆ ಗಣೇಶ್ ಎಂಬ ಮಗನೇ ಇರಲಿಲ್ಲ ಎಂಬುದು ದೃಢಪಟ್ಟಿದೆ.
ನಕಲಿ ಕ್ರಯಪತ್ರ ಮಾಡಿಸಿಕೊಂಡಿದ್ದ ಗಣೇಶ್, ಆ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದ. ಈ ಮೋಸದ ಬಗ್ಗೆ ಅರಿತ ಮುಕುಂದ ಅವರು 2022 ರಲ್ಲಿ ದೂರು ನೀಡಿದ್ದರು. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಒಟ್ಟು 40 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸುಮಾರು ಎರಡು ವರ್ಷಗಳ ನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದ್ದು, ತನಿಖೆ ಕೈಗೊಂಡ ಸಿಸಿಬಿ ಇದೀಗ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.



































