
ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿಯನ್ನು ತೀವ್ರವಾಗಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಬಂಡಾಟ, ಗೂಂಡಾಗಿರಿ ಹೆಚ್ಚು ದಿನ ನಡೆಯುವುದಿಲ್ಲ. ಕಾಂಗ್ರೆಸ್ ಪುಢಾರಿಗಳಿಗೆ ಬಡ್ಡಿ ಸಮೇತ ಉತ್ತರ ನೀಡುವ ಕಾಲ ಬಂದೇ ಬರುತ್ತದೆ,” ಎಂದು ಎಚ್ಚರಿಸಿದರು. ಗುರುವಾರ (ಏ.10) ಉಡುಪಿಯಲ್ಲಿ ನಡೆದ ‘ಜನಾಕ್ರೋಶ ಯಾತ್ರೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ತೀವ್ರ ವಾಗ್ದಾಳಿ ನಡೆಸಿದರು. ಕಲ್ಸಂಕದಿಂದ ಆರಂಭಗೊಂಡ ಯಾತ್ರೆ, ಉಡುಪಿ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯ ಮುಂದೆ ನಡೆದ ಬೃಹತ್ ಸಮಾವೇಶದೊಂದಿಗೆ ಮುಕ್ತಾಯವಾಯಿತು.
ವಿಜಯೇಂದ್ರ ಅವರು ರಾಜ್ಯ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿ, “ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ, ಬೆಲೆ ಏರಿಕೆ, ಆರ್ಥಿಕ ಹಿನ್ನಡೆ, ದುಷ್ಕರ್ಮಿಗಳಿಗಾಗುತ್ತಿರುವ ರಕ್ಷಣೆ ಹಾಗೂ ಸರ್ಕಾರದ ದುರಾಡಳಿತದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ , ಸರ್ಕಾರದ ವಿರುದ್ಧ ಜನರ ಹೋರಾಟ ಶುರುವಾಗಿದೆ. ಬಿಜೆಪಿಯ ಈ ಯಾತ್ರೆ ಜನರ ನೋವನ್ನು ತೋರುವ ಧ್ವನಿಯಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಹಾಗೆಯೇ ಜನತೆಗೆ ನಿಷ್ಠಾವಂತ ಆಡಳಿತ ನೀಡಬೇಕಾದ ಸರ್ಕಾರವೇ ಈಗ ಜನರ ಆಕ್ರೋಶಕ್ಕೆ ಗುರಿಯಾಗಿರುವುದನ್ನೂ ಉಲ್ಲೇಖಿಸಿದರು.
ಈ ಯಾತ್ರೆಯಲ್ಲಿ ಜಿಲ್ಲೆಯ ಹಲವಾರು ಕ್ಷೇತ್ರಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.