
ಬೆಂಗಳೂರು: ಅಕ್ರಮ ಸಂಬಂಧದ ವಿಚಾರವಾಗಿ ಮನನೊಂದು ವಿವಾಹಿತೆಯೊಬ್ಬರು ಓಯೋ (Oyo) ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಮಾಕ್ಷಿಪಾಳ್ಯದ ನಿವಾಸಿಯಾದ ಯಶೋಧಾ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತಳಿಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ ಗೋವಿಂದರಾಜ ಅವರು ಕಾರು ಚಾಲಕರಾಗಿ ಮತ್ತು ಫೈನಾನ್ಸ್ ಕೆಲಸ ಮಾಡುತ್ತಿದ್ದಾರೆ.
ಪ್ರಕರಣದ ವಿವರ:
ಯಶೋಧಾ ಅವರು ವಾಸವಿದ್ದ ಕಾಮಾಕ್ಷಿಪಾಳ್ಯದ ಪಕ್ಕದ ಮನೆಯ ನಿವಾಸಿ ಹಾಗೂ ಆಡಿಟರ್ ಆಗಿರುವ ವಿಶ್ವನಾಥ್ ಎಂಬಾತನ ಜೊತೆ ಕಳೆದ ಕೆಲವು ವರ್ಷಗಳಿಂದ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ವಿಶ್ವನಾಥ್ ಬೇರೆಡೆ ಮನೆಗೆ ಸ್ಥಳಾಂತರಗೊಂಡಿದ್ದನು.
ಈ ನಡುವೆ, ಯಶೋಧಾ ಅವರು ತಮ್ಮ ಆಪ್ತ ಸ್ನೇಹಿತೆಯನ್ನು ವಿಶ್ವನಾಥ್ಗೆ ಪರಿಚಯ ಮಾಡಿಕೊಟ್ಟಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡ ವಿಶ್ವನಾಥ್, ಯಶೋಧಾ ಸ್ನೇಹಿತೆಯೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದ. ಈ ಕಾರಣದಿಂದಾಗಿ, ಆತ ಯಶೋಧಾಳಿಂದ ದೂರವಿರಲು ಪ್ರಯತ್ನಿಸುತ್ತಿದ್ದ.
ವಿಶ್ವನಾಥ್ನ ಈ ವರ್ತನೆಯಿಂದ ಅನುಮಾನಗೊಂಡ ಯಶೋಧಾ, ತನ್ನ ಪ್ರಿಯಕರ ಮತ್ತು ಸ್ನೇಹಿತೆಯ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಓಯೋ ಕೊಠಡಿಯಲ್ಲಿ ಗಲಾಟೆ ಮತ್ತು ಆತ್ಮಹತ್ಯೆ:
ಘಟನೆ ನಡೆದ ಗುರುವಾರ, ವಿಶ್ವನಾಥ್ ಹೌಸಿಂಗ್ ಬೋರ್ಡ್ ಬಳಿಯ ಓಯೋ ಕಂಫರ್ಟ್ನಲ್ಲಿ ರೂಂ ಬುಕ್ ಮಾಡಿದ್ದ ವಿಚಾರ ಯಶೋಧಾಗೆ ತಿಳಿದುಬಂದಿತ್ತು. ತಕ್ಷಣವೇ ಯಶೋಧಾ ಸಹ ಅದೇ ಲಾಡ್ಜ್ನಲ್ಲಿ ಮತ್ತೊಂದು ರೂಂ ಬುಕ್ ಮಾಡಿದ್ದರು. ರಾತ್ರಿ ಸುಮಾರು 8:00 ಗಂಟೆಯ ಸುಮಾರಿಗೆ ವಿಶ್ವನಾಥ್ ತನ್ನ ಸ್ನೇಹಿತೆಯೊಂದಿಗೆ ರೂಂ ಪ್ರವೇಶಿಸುವುದನ್ನು ಯಶೋಧಾ ಗಮನಿಸಿದ್ದರು.
ತಕ್ಷಣವೇ ಯಶೋಧಾ ಆ ಕೋಣೆಗೆ ತೆರಳಿ ಅವರಿಬ್ಬರೊಂದಿಗೆ ತೀವ್ರ ಗಲಾಟೆ ಮಾಡಿದ್ದಾರೆ. ಗಲಾಟೆಯ ಸಂದರ್ಭದಲ್ಲಿ ವಿಶ್ವನಾಥ್ನ ಸ್ನೇಹಿತೆ ಸ್ಥಳದಿಂದ ಓಡಿ ಹೋಗಿದ್ದಳು. ನಂತರ ವಿಶ್ವನಾಥ್, ಯಶೋಧಾಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾನೆ. ಆದರೆ, ಮನನೊಂದ ಯಶೋಧಾ ರಾತ್ರಿ ಸುಮಾರು 10:30 ಗಂಟೆಗೆ ತಾನು ಬುಕ್ ಮಾಡಿದ್ದ ಕೊಠಡಿಗೆ ಹೋಗಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಲ್ಪ ಸಮಯದ ನಂತರ ವಿಶ್ವನಾಥ್ ಪಕ್ಕದ ರೂಮಿನಲ್ಲಿದ್ದ ಯಶೋಧಾ ಕೋಣೆಯ ಬಾಗಿಲು ತಳ್ಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಆತ ಲಾಡ್ಜ್ನ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಯಶೋಧಾ ಅವರ ಪತಿ ಗೋವಿಂದರಾಜ ಅವರು ಪತ್ನಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮಾಗಡಿ ರಸ್ತೆ ಠಾಣೆಯಲ್ಲಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಘಟನೆಯ ಹಿಂದಿನ ನಿಜವಾದ ಕಾರಣ ತಿಳಿಯಲು ತನಿಖೆಯನ್ನು ಮುಂದುವರಿಸಿದ್ದಾರೆ.



































