
ಕೋಮ್, ಇರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದ್ದು, ಇರಾನ್ನ ಅತ್ಯುನ್ನತ ಧಾರ್ಮಿಕ ಮತ್ತು ರಾಜಕೀಯ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ಬೆನ್ನಲ್ಲೇ ಇಡೀ ದೇಶವು ಸೇಡಿನ ಜ್ವಾಲೆಯಲ್ಲಿ ಬೆಂದು ಹೋಗುತ್ತಿದೆ. ಶನಿವಾರದಂದು ಟೆಹ್ರಾನ್ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಖಮೇನಿ ಅವರು ಮೃತಪಟ್ಟಿದ್ದಾರೆ ಎಂದು ಭಾನುವಾರ ಅಧಿಕೃತವಾಗಿ ಘೋಷಿಸಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ, ಇರಾನ್ನ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿರುವ ಕೋಮ್ ನಗರದ ಜಮ್ಕರನ್ ಮಸೀದಿಯ ಗುಮ್ಮಟದ ಮೇಲೆ ಕೆಂಪು ಬಣ್ಣದ ಧ್ವಜವನ್ನು ಹಾರಿಸಲಾಗಿದೆ. ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಈ ಕೆಂಪು ಧ್ವಜವು ಕೇವಲ ಶೋಕದ ಸಂಕೇತವಲ್ಲ, ಬದಲಿಗೆ ಅನ್ಯಾಯದ ವಿರುದ್ಧದ “ಪರಿಶುದ್ಧ ಸೇಡು” ಮತ್ತು “ನ್ಯಾಯಕ್ಕಾಗಿ ಹೋರಾಟ”ದ ಸಂಕೇತವಾಗಿದೆ.
ಖಮೇನಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇರಾನ್ ಮಾತ್ರವಲ್ಲದೆ, ಭಾರತದ ಕಾಶ್ಮೀರ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಸೀದಿಯ ಮೇಲಿನ ಈ ಧ್ವಜವು ಶತ್ರು ರಾಷ್ಟ್ರಗಳಿಗೆ ಇರಾನ್ ನೀಡುತ್ತಿರುವ ಯುದ್ಧದ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಸ್ತುತ ಇರಾನ್ನಾದ್ಯಂತ ಶೋಕಾಚರಣೆ ಮನೆಮಾಡಿದ್ದು, ಮುಂಬರುವ ದಿನಗಳಲ್ಲಿ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಪ್ರಬಲ ಪ್ರತಿಘಾತ ನೀಡಲು ಅಲ್ಲಿನ ಸೇನಾ ಪಡೆಗಳು ಸನ್ನದ್ಧವಾಗುತ್ತಿವೆ.



































