
ಚಿಕ್ಕಮಗಳೂರು: ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿ ಇದ್ದ ಕೋಟೆಹೊಂಡ ರವೀಂದ್ರ ಇಂದೇ ಶರಣಾಗಲು ನಿರ್ಧರಿಸಿದ್ದು, ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಶರಣಾಗಲಿದ್ದಾರೆ.
ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ನಿವಾಸಿಯಾಗಿರುವ ಕೋಟೆಹೊಂಡ ರವೀಂದ್ರ, ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು. ಈ ಮೊದಲು, ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ. ವಸಂತ (ತಮಿಳುನಾಡು), ಟಿ.ಎನ್. ಜಿಷಾ (ಕೇರಳ) ಒಳಗೊಂಡ ತಂಡ ಜನವರಿ 8ರಂದು ಮುಖ್ಯವಾಹಿನಿಗೆ ಬಂದಿತ್ತು. ಈ ಎಲ್ಲಾ ಶರಣಾಗತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸ್ವಾಗತಿಸಲಾಗಿತ್ತು ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಈವರೆಗೆ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾಗರಿಕ ವೇದಿಕೆ ಹಾಗೂ ನಕ್ಸಲ್ ಶರಣಾಗತಿ ಸಮಿತಿ ಅವರೊಂದಿಗೆ ನಿರಂತರ ಸಂವಹನ ನಡೆಸಿ, ಶರಣಾಗುವಂತೆ ಮನವಿ ಮಾಡಿತ್ತು.
ನಿನ್ನೆ ಕೊನೆಗೂ ರವೀಂದ್ರ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ. ಇದಾದ ಬಳಿಕ, ಇಂದು ಬೆಳಿಗ್ಗೆ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಅವರು ಶರಣಾಗಲು ನಿರ್ಧರಿಸಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಕೆ.ಪಿ. ಶ್ರೀಪಾಲ್ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಕೆ.ಎಲ್. ಅಶೋಕ್ ತಿಳಿಸಿದ್ದಾರೆ.