
ಕಾರ್ಕಳ : ಕಾರ್ಕಳದ ಕೌಡೂರು ಗ್ರಾಮದ ರಂಗನಪಲ್ಕೆ ನಿವಾಸಿ ಕವಿತಾ ಕೃಪಾಲಿನಿ ಎಂಬ ಮಹಿಳೆಗೆ ಕಾರ್ಕಳದ ಅತ್ತೂರು, ದೂಪದಕಟ್ಟೆ ನಿವಾಸಿ ರಾಘವೇಂದ್ರ. ಎಸ್. ಎಂಬುವವರು ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ 9.5 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.
ಮಹಿಳೆಗೆ ತಾನು ಮೋಸಹೋಗಿದ್ದೇನೆ ಎಂದು ತಿಳಿಯುತ್ತಿದ್ದಂತೆಯೇ ಆಕೆ ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಾಜರಾಗಿ, “ನಾನು ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ಸ್ಟೇಷನರಿ ಮತ್ತು ಬುಕ್ ವ್ಯಾಪಾರದ ಅಂಗಡಿಯನ್ನು ನಡೆಸಿಕೊಂಡಿದ್ದು, ರಾಘವೇಂದ್ರ. ಎಸ್. ಎಂಬುವವರು ನನಗೆ ಪರಿಚಿತರಿದ್ದು, ಅವರು ನನಗೆ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (ಪಿಎಂಈಜಿಪಿ)ಅಡಿಯಲ್ಲಿ ಸಿಗುವ ಸಾಲದಿಂದ ನಿಮಗೆ ಜೆರಾಕ್ಸ್ ಮಿಷನ್, ಲ್ಯಾಮಿನೇಷನ್ ಮಿಷನ್, ಲ್ಯಾಪ್ಟಾಪ್, ಹಾಗೂ ಇತರ ಪರಿಕರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಸಾಲಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ನನ್ನಿಂದ ಪಡೆದಿದ್ದಾರೆ. ನಂತರ ಅವರದೇ ಆದ Lakshmi ಎಂಟರ್ಪ್ರೈಸಸ್ ಮಳಿಗೆಯ ಕೊಟೇಶನ್ ನೀಡಿದ್ದಾರೆ. ಅದರಂತೆ ನಾನು ನನ್ನ ದಾಖಲಾತಿ ಹಾಗೂ ಕೊಟೇಶನನ್ನು ನಾನು ಖಾತೆ ಹೊಂದಿರುವ ಹಾಗೂ ಸಾಲಕ್ಕೆ ಅರ್ಜಿ ಹಾಕಿದ್ದ ಕೆನರಾ ಬ್ಯಾಂಕ್ ಕಣಜಾರು ಶಾಖೆಗೆ ನೀಡಿದ್ದು,ನನಗೆ 9.50 ಲಕ್ಷ ಲೋನ್ ಸ್ಯಾಂಕ್ಷನ್ ಆಗಿದೆ. ನಂತರ ನನ್ನ ಖಾತೆಯಿಂದ ದಿನಾಂಕ 18.12.2024 ರಂದು ಕೊಟೇಶನ್ ನೀಡಿದ Lakshmi ಎಂಟರ್ಪ್ರೈಸಸ್ ನ ಖಾತೆ ಐಸಿಐಸಿಐ ಬ್ಯಾಂಕ್ ಕಾರ್ಕಳಕ್ಕೆ ಸುಮಾರು 9.50 ಲಕ್ಷ ಹಣ ವರ್ಗಾವಣೆ ಆಗಿರುತ್ತದೆ. ನಾನು Lakshmi ಎಂಟರ್ಪ್ರೈಸಸ್ ಗೆ ಹಣ ಜಮೆಯಾದ ಬಗ್ಗೆ ರಾಘವೇಂದ್ರ. ಎಸ್.ರವರಿಗೆ ತಿಳಿಸಿದ್ದು, ಆಗ ರಾಘವೇಂದ್ರರವರು 25 ದಿನಗಳಲ್ಲಿ ಕೊಟೇಶನ್ ನಲ್ಲಿರುವ ಎಲ್ಲಾ ಸಾಮಗ್ರಿಗಳನ್ನ ನೀಡುತ್ತೇನೆ ಎಂದು ಭರವಸೆ ನೀಡಿ ನನಗೆ ಯಾವುದೇ ಸಾಮಾಗ್ರಿಗಳನ್ನು ಕೊಡದೇ ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ” ಎಂಬುದಾಗಿ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2025 ಕಲಂ 316(2),318(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಡಿ.ಆರ್, ಪೊಲೀಸ್ ಉಪ ನಿರೀಕ್ಷಕರುಗಳಾದ ಸಂದೀಪ್ ಕುಮಾರ್ ಶೆಟ್ಟಿ, ಶಿವಕುಮಾರ್ ಹಾಗೂ ಸಿಬ್ಬಂದಿಗಳ ತಂಡ ತಾಂತ್ರಿಕ ಸಹಾಯದಿಂದ ಹಾಗೂ ಬಾತ್ಮಿದಾರರ ಸಹಾಯದಿಂದ ಬೆಂಗಳೂರಿನ ಗಾಂಧಿನಗರದಲ್ಲಿ ಆರೋಪಿ ರಾಘವೇಂದ್ರ ಎಸ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ. ಈತನು ಈ ಹಿಂದೆ ಹಲವು ಜನಗಳಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.